

ಸಿಡ್ನಿ, ಜನವರಿ 7: ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಮೊಟ್ಟ ಮೊದಲ ಟೆಸ್ಟ್ ಸರಣಿ ಜಯಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಬಳಗ ಐತಿಹಾಸಿಕ ಸಾಧನೆ ಮಾಡಿದೆ.
ಸಿಡ್ನಿಯಲ್ಲಿ ನಡೆದ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ಮಳೆಯ ಕಾರಣ ಆಟ ರದ್ದುಗೊಂಡು ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಸರಣಿಯಲ್ಲಿ 2-1ರಿಂದ ಮುನ್ನಡೆ ಪಡೆದುಕೊಂಡಿದ್ದ ಭಾರತ, ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದು ಬೀಗಿತು.
ಆತಿಥೇಯ ಆಸ್ಟ್ರೇಲಿಯಾಕ್ಕೆ ಅದರದ್ದೇ ನೆಲದಲ್ಲಿ 30 ವರ್ಷಗಳ ಬಳಿಕ ಫಾಲೋಆನ್ ಹೇರಿದ್ದ ಭಾರತಕ್ಕೆ ಇನ್ನಿಂಗ್ಸ್ ಸೋಲಿಕ ಕಹಿ ಉಣಬಡಿಸುವ ಆಸೆಗೆ ಮಳೆರಾಯ ತಣ್ಣೀರೆರಚಿದ. ಕೊನೆಯ ಎರಡು ದಿನ ಕಾಡಿದ ವರುಣ, ಭಾರತದ ಬೃಹತ್ ಗೆಲುವಿನ ಬಯಕೆಯನ್ನು ಕಿತ್ತುಕೊಂಡಿತು. ಅದರಲ್ಲಿಯೂ ಐದನೇ ದಿನವಾದ ಸೋಮವಾರ ಒಂದೂ ಎಸೆತದ ಆಟ ನಡೆಯಲಿಲ್ಲ.
ಫಾಲೋಆನ್ಗೆ ಒಳಪಟ್ಟು ಎರಡನೆಯ ಇನ್ನಿಂಗ್ಸ್ನಲ್ಲಿ 6 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಹೀನಾಯ ಸೋಲಿನ ಭೀತಿಯಲ್ಲಿತ್ತು. ಪಂದ್ಯ ಉಳಿಸಿಕೊಳ್ಳಲು ಡ್ರಾ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.
ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿದ ಚೇತೇಶ್ವರ ಪೂಜಾರ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವಗಳಿಗೆ ಪಾತ್ರರಾದರು.
ಭಾರತ ಟೆಸ್ಟ್ ತಂಡ ಮೊದಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು 1947-48ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಯಾವ ಪ್ರವಾಸದಲ್ಲಿಯೂ ಭಾರತ ಸರಣಿಯನ್ನು ಗೆದ್ದುಕೊಂಡಿರಲಿಲ್ಲ.
ಭಾರತದಲ್ಲಿ 2014-15ರಲ್ಲಿ ನಡೆದ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದುಕೊಂಡಿತ್ತು. ಈ ಸರಣಿ ಗೆಲುವಿನಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಭಾರತದಲ್ಲಿಯೇ ಉಳಿದುಕೊಂಡಿದೆ.