ಮಹಿಳಾ ಕ್ರಿಕೆಟರ್ ರಾಜೇಶ್ವರಿಗೆ ದಕ್ಕದ 'ವಸತಿ ಭಾಗ್ಯ'
ಬೆಂಗಳೂರು, ಅಕ್ಟೋಬರ್ 04: ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪರ ಆಡಿದ್ದ ಇಬ್ಬರು ಕನ್ನಡತಿಯರಿಗೆ ಕರ್ನಾಟಕ ರಾಜ್ಯ ಸರ್ಕಾರ ತಲಾ 25 ರು. ಲಕ್ಷ ಬಹುಮಾನ ಘೋಷಿಸಿದ್ದು ನೆನಪಿರಬಹುದು. ನಗದು ಬಹುಮಾನಕ್ಕಿಂತ ಬಹುಮಾನ ರೂಪದಲ್ಲಿ ವಸತಿ ಭಾಗ್ಯ ನಿರೀಕ್ಷಿಸಿದ್ದ ರಾಜೇಶ್ವರಿಗೆ ನಿರಾಶೆಯಾಗಿದೆ.
ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿರುವ ರಾಜೇಶ್ವರಿಗೆ ಸರಿಯಾದ ಸೂರಿಲ್ಲ ಎಂಬುದು ದುರಂತವಾದರೂ ಸತ್ಯ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರನ್ನರ್ ಅಪ್ ಆಗಿದ್ದು ಹಲವೆಡೆ ಸನ್ಮಾನ ಮಾಡಿಸಿಕೊಂಡಿದ್ದು ಎಲ್ಲವೂ ಸಂತಸ ತಂದಿದೆ. ಆದರೆ, ಕುಟುಂಬಕ್ಕೆ ಸರಿಯಾದ ಮನೆ ದೊರೆತರೆ ಸಾಕು ಎನ್ನುವುದು ರಾಜೇಶ್ವರಿ ಅಳಲು.

ಮೂರು ವರ್ಷಗಳ ಕೆಳಗೆ ತಂದೆಯನ್ನು ಕಳೆದುಕೊಂಡ ರಾಜೇಶ್ವರಿ ಅವರ ಮನೆಯಲ್ಲಿ ತಾಯಿ ಸವಿತಾ, ತಂದಿ ರಾಮೇಶ್ವರಿ ಹಾಗೂ ತಮ್ಮ ವಿಶ್ವನಾಥ್ ಇದ್ದಾರೆ. ಬಡ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ರಾಜೇಶ್ವರಿ ಸಾಧನೆ ವಿಜಯಪುರ ದಾಟಿ ಇಂದು ಲಾರ್ಡ್ಸ್ ಅಂಗಳ ಮುಟ್ಟಿದೆ.
ಆದರೆ, ಸರ್ಕಾರ ನೀಡಿದ್ದ ವಸತಿ ಭಾಗ್ಯ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ಜತೆ ಫೋನ್ ಮೂಲಕ ಮಾತನಾಡಿದ ರಾಜೇಶ್ವರಿ ಅವರ ತಾಯಿ ಸವಿತಾ, ನಾವು ಕಳೆದ ಮೂರು ವರ್ಷಗಳಲ್ಲಿ ಮನೆಯಿಂದ ಮನೆಗೆ ಹಾರುತ್ತಲೇ ಇದ್ದೇವೆ. ಸರಿಯಾದ ನೆಲೆ ಇಲ್ಲದೆ ತುಂಬಾ ಕಷ್ಟವಾಗಿದೆ. ಜೀವನೋಪಾಯಕ್ಕೆ ರಾಜೇಶ್ವರಿ ಮೇಲೆ ಎಲ್ಲರೂ ಅವಲಂಬಿತರಾಗಿದ್ದಾರೆ ಎಂದರು.
ಆಗಸ್ಟ್ 10ರಂದು ನಡೆದ ಸನ್ಮಾನ ಸಮಾರಂಭದಲ್ಲಿ ರಾಜೇಶ್ವರಿ ಗಾಯಕ್ವಾಡ್ ಹಾಗೂ ವೇದಾ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ 5 ಲಕ್ಷ ರು ಪ್ರೋತ್ಸಾಹ ಧನವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ರಾಜೇಶ್ವರಿಗೆ ವಿಜಯಪುರ ಅಥವಾ ಬೆಂಗಳೂರಿನಲ್ಲಿ ಮನೆ ನೀಡುವ ಭರವಸೆ ಸಿಕ್ಕಿತ್ತು.
ಆದರೆ, ಇಲ್ಲಿ ತನಕ ಸರ್ಕಾರದಿಂದ ಅಥವಾ ಕೆಎಸ್ ಸಿಎನಿಂದ ಯಾವುದೇ ಮಾಹಿತಿ ಬಂದಿಲ್ಲ. ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿರುವುದರಿಂದ ತಿಂಗಳ ಖರ್ಚು ಸರಿದೂಗಿಸಲು ಸಾಧ್ಯವಾಗುತ್ತಿದೆ
ರೈಲ್ವೇಸ್ ಕೋಚ್ ಕಲ್ಪನ ವೆಂಕಟಾಚಾರ್ ಕೂಡಾ ಮಾತನಾಡಿ, ರಾಜೇಶ್ವರಿ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಕನಿಷ್ಟ ಒಂದು ಫ್ಲಾಟ್ ಹೊಂದುವ ಆಸೆಯನ್ನು ತೀರಿಸಲು ಸರ್ಕಾರ ಅಸಮರ್ಥವಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications