ಟೀಮ್ ಇಂಡಿಯಾ ಡಿಫೆಂಡಿಂಗ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಇನ್ನು ಒಂದು ಹೆಜ್ಜೆ ಹಿಂದೆ ಇದೆ. ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಸಂಘಟಿತ ಆಟದ ಪ್ರದರ್ಶನವನ್ನು ನೀಡಿ ಇಂಗ್ಲೆಂಡ್ ತಂಡವನ್ನು ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 7 ರನ್ಗಳಿಂದ ಸೋಲಿಸಿದೆ. ಟೀಮ್ ಇಂಡಿಯಾ ಈ ಗೆಲುವಿನ ಮೂಲಕ ಪ್ರಸಕ್ತ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಭಾನುವಾರ ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ.
ಟೀಮ್ ಇಂಡಿಯಾ ಸಂಜು ಸ್ಯಾಮ್ಸನ್ ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿತು. ಈ ಸವಾಲಿನ ಮೊತ್ತವನ್ನು ಕಲೆ ಹಾಕಿದ ಬಳಿಕ ಟೀಮ್ ಇಂಡಿಯಾ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ ಜಾಕಬ್ ಬೆಥೆಲ್ ಅವರು ಬಾರಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ವಿರೋಚಿತ ಸೋಲನ್ನು ಕಂಡಿತು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬುಮ್ರಾ ತಮ್ಮ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು. ಆದರೆ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಸಹ ತಮ್ಮ ಕ್ಯಾಚಿಂಗ್ನಿಂದ ಎಲ್ಲರ ಚಿತ್ತ ತಮ್ಮತ್ತ ಸೆಳೆಯುವಂತೆ ಮಾಡಿದರು.

ಇಂಗ್ಲೆಂಡ್ ಸಹ ಬೇಕಾಗಿದ್ದ ರನ್ ರೇಟ್ನಂತೆ ರನ್ ಕಲೆ ಹಾಕುತ್ತಲೇ ಸಾಗಿತ್ತು. ಆದರೆ 14ನೇ ಓವರ್ ಬೌಲ್ ಮಾಡಿದ ಅರ್ಶದೀಪ್ ಸಿಂಗ್ ಭರವಸೆಯ ಬ್ಯಾಟರ್ ವಿಲ್ ಜಾಕ್ಸ್ ಅವರಿಗೆ ಬಹವಾಗಿ ಕಾಡಿದರು. ಅಕ್ಷರ್ ಕ್ಯಾಚ ಹಿಡಿದ ಚೆಂಡನ್ನು ವಿಲ್ ಜಾಕ್ಸ್ ಡೀಪ್ ಕವರ್ ಮೇಲೆ ಸಿಕ್ಸರ್ ಬಾರಿಸಲಲು ನೋಡಿದರು. ಆದರೆ ಅಲ್ಲಿಯೇ ನಿಂತಿದ್ದ ಅಕ್ಷರ್ ಪಟೇಲ್ ಉತ್ತಮ ಕ್ಯಾಚ್ ಪಡೆದು ಅಬ್ಬರಿಸಿದರು.
ವಿಲ್ ಜಾಕ್ಸ್ ಡೀಪ್ ಕವರ್ ಮೇಲಿನಿಂದ ಸಿಕ್ಸರ್ ಬಾರಿಸಲು ಹೋದಾಗ, ಅಕ್ಷರ್ ಚೆಂಡು ತಮ್ಮ ಬಳಿಯೇ ಬರುತ್ತಿರುವುದನ್ನು ಗಮನಿಸಿ ತಮ್ಮ ಎಡಬದಿಯಲ್ಲಿ ಓಡಿ ಚೆಂಡನ್ನು ತಮ್ಮ ಎರಡೂ ಕೈಗಳಲ್ಲಿ ಹಿಡಿದರು. ಆದರೆ, ಬ್ಯಾಲೆನ್ಸ್ ತಪ್ಪಿ ಅಕ್ಷರ್ ಬೌಂಡರಿ ಗೆರೆಯನ್ನು ದಾಟುತ್ತಿದ್ದರು. ಆಗ ಸಮಯ ಪ್ರಜ್ಞೆ ಪ್ರದರ್ಶಿಸಿದ ಅಕ್ಷರ್, ಅಲ್ಲಿಯೇ ಫೀಲ್ಡ್ ಮಾಡುತ್ತಿದ್ದ ಶಿವಂ ದುಬೆಗೆ ಚೆಂಡನ್ನು ನೀಡಿದರು. ಈ ಮೂಲಕ ಸೂಪರ್ ಮ್ಯಾನ್ ರೀತಿಯ ಎಫರ್ಟ್ ನೀಡಿದರು.
ಈ ಕ್ಯಾಚ್ ನೋಡಿದ ಅಭಿಮಾನಿಗಳು ಸೂರ್ಯಕುಮಾರ್ ಯಾದವ್ 2024ರಲ್ಲಿ ಹಿಡಿದಿದ್ದ ಡೇವಿಡ್ ಮಿಲ್ಲರ್ ಕ್ಯಾಚ್ ನೆನಪಿಸಿಕೊಂಡರು. ಸೂರ್ಯ ಅಂದು ಆ ಕ್ಯಾಚ್ ಪಡೆದು ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದರೆ, ಇಂದು ಅಕ್ಷರ್ ಸೊಗಸಾದ ಕ್ಯಾಚ್ ಪಡೆದು ತಂಡ ಫೈನಲ್ ಪ್ರವೇಶಿಸುವಂತೆ ಮಾಡಿದರು. ಭಾರತ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಅಕ್ಷರ್ ಪಟೇಲ್ ಪಾತ್ರ ಬಹಳ ಮುಖ್ಯ.