ಗ್ವಾಲಿಯರ್: ಭರವಸೆಯ ಬೌಲರ್ಗಳ ಬಿಗುವಿನ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ 19.5 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು.
ಬಾಂಗ್ಲಾದೇಶದ ಆರಂಭಿಕರಾದ ಪರ್ವೇಜ್ ಹುಸೇನ್ ಹಾಗೂ ಲಿಯಾನ್ ದಾಸ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಇಬ್ಬರೂ ಆರಂಭಿಕರನ್ನು ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಬಲಿ ಪಡೆದರು.

ಪ್ರವಾಸಿ ತಂಡ ಕೇವಲ 14 ರನ್ ಆಗುವಷ್ಟರಲ್ಲಿ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿಸಿದ್ದರು. ಅರ್ಷದೀಪ್ ಸಿಂಗ್ ಮೊದಲ ಓವರ್ನ ಐದನೇ ಎಸೆತದಲ್ಲಿ ಒಂದು, ತಮ್ಮ ಎರಡನೇ ಓವರ್ನ ಮೊದಲ ಎಎಸೆತದಲ್ಲಿ ಒಂದು ವಿಕೆಟ್ ಪಡೆದು ಅಬ್ಬರಿಸಿದರು.
ಮೂರನೇ ವಿಕೆಟ್ಗೆ ನಜ್ಮುಲ್ ಹುಸೇನ್ ಶಾಂತೋ ಹಾಗೂ ತೌಹೀದ್ ಹೃದಯ (12) ಕೊಂಚ ಭಾರತೀಯ ಬೌಲರ್ಗಳನ್ನು ಕಾಡಿದರು. ಈ ಜೋಡಿ 27 ಎಸೆತಗಳಲ್ಲಿ 26 ರನ್ ಸೇರಿಸಿತು. ನಜ್ಮುಲ್ ಹುಸೇನ್ ಶಾಂತೋ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಸೂಚನೆ ನೀಡಿದ್ದರು. ಆದರೆ ಇವರ ಆಟಕ್ಕೆ ಸ್ಪಿನ್ ಬೌಲರ್ ವಾಶಿಂಗ್ಟನ್ ಸುಂದರ್ ಬ್ರೇಕ್ ಹಾಕಿದರು. ಇವರು 25 ಎಸೆತಗಳಲ್ಲಿ ತಲಾ ಒಂದು ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 27 ರನ್ ಸಿಡಿಸಿ ಔಟ್ ಆದರು.

ಬಾಂಗ್ಲಾದೇಶದ ಪರ ಮಧ್ಯಮ ಕ್ರಮಾಂಕದಲ್ಲಿ ರಿಶಾದ್ ಹೊಸೈನ್ (11), ತಸ್ಕಿನ್ ಅಹ್ಮದ್ (12) ಹಾಗೂ ಮೆಹದಿ ಹಸನ್ ಮಿರ್ಜಾ ಅವರನ್ನು ಹೊರತು ಪಡಿಸಿದರೆ, ಬೆರೆ ಯಾವ ಆಟಗಾರರು ಡಬಲ್ ಡಿಜಿಟ್ ಮುಟ್ಟಲಿಲ್ಲ. ಮೆಹದಿ ಹಸನ್ 32 ಎಸೆತಗಳಲ್ಲಿ 3 ಬೌಂಡರಿ, 35 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಟೀಮ್ ಇಂಡಿಯಾದ ಭರವಸೆ ಬೌಲರ್ಗಳು ಅಮೋಘ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ 14 ರನ್ ನೀಡಿ ಮೂರು ವಿಕೆಟ್ ಪಡೆದರೆ, ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ 31 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ, ಮಯಾಂಕ್ ಯಾದವ್, ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.