ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ. ಈ ವಿಶ್ವಕಪ್ ಇನ್ನೇನು ಕೆಲವೇ ದಿನಗಳಲ್ಲಿ ಸೂಪರ್ 8 ಹಂತದ ಪಂದ್ಯಗಳು ನಡೆಯಲಿವೆ. ಈ ಮಧ್ಯೆ ಒಂದು ಸುದ್ದಿ ಬರುತ್ತಿದ್ದು, ಈ ಸುದ್ದಿ ಭಾರತದ ಚಿಂತೆಯನ್ನು ಹೆಚ್ಚಿಸಿದೆ.
ಭಾರತದಲ್ಲಿ ಭದ್ರತಾ ಕಾರಣಗಳಿಂದ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಟೂರ್ನಿಯಿಂದ ಹೊರಗಿಟ್ಟಿತ್ತು. ಐಸಿಸಿ ಈ ನಿರ್ಣಯವನ್ನು ಪಾಕಿಸ್ತಾನ ಖಂಡಿಸಿತ್ತು. ಅಲ್ಲದೆ ಭಾರತದ ವಿರುದ್ದದ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಘೋಷಿಸಿತ್ತು. ಆದರೆ ಬಳಿಕ ಯು-ಟರ್ನ್ ಹೊಡೆದು ಭಾರತದ ವಿರುದ್ಧ ಪಂದ್ಯವನ್ನು ಆಡಿತ್ತು. ಈ ಎಲ್ಲ ವಿಷಯಗಳ ಮಧ್ಯೆ ಭಾರತದ ಮುಂದಿನ ಬಾರಿ ಐಸಿಸಿ ಈವೆಂಟ್ ಆಯೋಜಿಸುವುದು ಕಷ್ಟವಾಗುತ್ತಿದೆ.

ಭಾರತ 2029 ರ ಚಾಂಪಿಯನ್ಸ್ ಟ್ರೋಫಿ ಮತ್ತು 2031 ರ ಏಕದಿನ ವಿಶ್ವಕಪ್ನ ಭಾರತದ ಆತಿಥ್ಯ ವಹಿಸುವ ಕನಸು ಕಾಣುತ್ತಿತ್ತು. ಆದರೆ ಈ ಕನಸು ಈಗ ಅಪಾಯದಲ್ಲಿದೆ. ಭಾರತದ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಈ ಆತಿಥ್ಯಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಹೀಗಾಗಿ ಐಸಿಸಿ ಸ್ಥಳವನ್ನು ಬದಲಿಸಬಹುದು ಎಂದು ತಿಳಿದು ಬಂದಿದ್ದು, ಆಸ್ಟ್ರೇಲಿಯಾ ಈ ಅವಕಾಶವನ್ನು ಬಳಸಿಕೊಳ್ಳಲು ಆಸೆಗಣ್ಣಿನಿಂದ ನೋಡುತ್ತಿದೆ.
ಭಾರತ 2029 ಮತ್ತು 2031 ರ ಐಸಿಸಿ ಈವೆಂಟ್ ಆಯೋಜಿಸುವಲ್ಲಿ ವಿಫಲವಾದಲ್ಲಿ, ಈ ದೊಡ್ಡ ಟೂರ್ನಿಗೆ ಆಸ್ಟ್ರೇಲಿಯಾ ದ್ವಿತೀಯ ಆಯ್ಕೆಯಾಗಿ ಪರಿಗಣಿಸಬಹುದು ಎಂದು ಆಸ್ಟ್ರೇಲಿಯಾದ "ದಿ ಏಜ್" ನಲ್ಲಿ ವರದಿ ಮಾಡಿದೆ.
ಮುಂದಿನ ಆವೃತ್ತಿಯ ಟಿ20 ವಿಶ್ವಕಪ್ ಜಂಟಿಯಾಗಿ ಆಯೋಜಿಸುವ ಕನಸನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಹೊಂದಿವೆ. ಈ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಮಹತ್ವದ ಹೇಳಿಕೆಯನ್ನು ಐಸಿಸಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಸದ್ಯದ ಪರಿಸ್ಥಿತಿ ತಣ್ಣಗಾದಂತೆ ಕಾಣುತ್ತಿದೆ. ಆದರೆ ಇದರ ಬಿಸಿ ಮುಂದಿನಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಭಾರತಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ. ಐಸಿಸಿ ಈವೆಂಟ್ಗಳಲ್ಲಿ ಇಂತಹ ಗೊಂದಲಗಳನ್ನು ತಪ್ಪಿಸಲು ಐಸಿಸಿ ಬದಲಿ ಸ್ಥಳಗಳನ್ನು ಹುಡುಕುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಪತ್ರಿಕೆ ವರದಿ ಮಾಡಿದೆ. ಕ್ರಿಕೆಟ್ನಲ್ಲಿ ಶಕ್ತಿ ಶಾಲಿಯಾಗಿ ಬೆಳೆಯುತ್ತಿರುವ ಭಾರತ, ಹಲವು ಐಸಿಸಿ ಟೂರ್ನಿಗಳನ್ನು ಆಯೋಜಿಸುತ್ತಿದೆ. ನೆರೆ ಹೊರೆಯವರೊಂದಿಗಿನ ಹದಗೆಟ್ಟ ಸಂಬಂಧ ಮತ್ತೊಮ್ಮೆ ಯೋಚನೆ ಮಾಡುವ ಹಂತಕ್ಕೆ ತಂದು ನಿಲ್ಲಿಸುವ ಸಾಧ್ಯತೆ ಇದೆ.
ಭಾರತ ಹಾಗೂ ಪಾಕಿಸ್ತಾನ, ಐಸಿಸಿ ನಡುವೆ ಒಂದು ಒಪ್ಪಂದ ನಡೆದಿದ್ದು, ಇದರ ಪ್ರಕಾರ ಉಭಯ ದೇಶಗಳು ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲಿವೆ. ಬಾಂಗ್ಲಾ ಸಹ ಇದೇ ಸಾಲಿಗೆ ಸೇರಿಕೊಳ್ಳುತ್ತಿದೆ. ಇನ್ನು ಬಾಂಗ್ಲಾದೇಶಕ್ಕೆ ಇದೇ ವರ್ಷ ಭಾರತ ಪ್ರವಾಸ ಬೆಳೆಸಬೇಕಿದೆ. ಆದರೆ ಈ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿಲ್ಲ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಹೊಸ ಮಾರ್ಗವನ್ನು ಹುಡುಕುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.