ಸದ್ಯ ಟೀಮ್ ಇಂಡಿಯಾ ಆಟಗಾರರು ಐಪಿಎಲ್ನಲ್ಲಿ ಬ್ಯೂಸಿ ಇದ್ದಾರೆ. ಒಂದು ವಾರದ ಮಟ್ಟಿಗೆ ಸ್ಥಗಿತವಾಗಿದ್ದ ಐಪಿಎಲ್ ಮತ್ತೆ ಮೇ 17 ರಿಂದ ಆರಂಭವಾಗಲಿದೆ. ಈ ಲೀಗ್ ಮುಗಿದ ಬಳಿಕ ಭಾರತ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಟೀಮ್ ಇಂಡಿಯಾ ದೊಡ್ಡ ಸವಾಲನ್ನು ಎದುರಿಸಲಿದೆ. ಅನುಭವಿ ಆಟಗಾರರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರು ಇಬ್ಬರು ಒಂದೇ ಸಮಯದಲ್ಲಿ ನಿವೃತ್ತಿ ಘೋಷಿಸಿದ್ದು ತಂಡಕ್ಕೆ ನುಂಗಲಾರದ ತುತ್ತಾಗಿದೆ.
ಒಂದು ವಾರದ ಅಂತರದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ಹಾಗೂ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಇವರಿಬ್ಬರೂ ಇಲ್ಲದೇ ತಂಡದ ಸಂಯೋಜನೆ ಹೇಗೆ ಇರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಯಾರಿಗೆಲ್ಲಾ ಈ ಬಾರಿ ಇಂಗ್ಲೆಂಡ್ ಫ್ಲೈಟ್ ಹತ್ತುವ ಅವಕಾಶ ಲಭಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಟೀಮ್ ಇಂಡಿಯಾವನ್ನು ಇಂಗ್ಲೆಂಡ್ ಸರಣಿಯ ವೇಳೆ ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಸ್ಥಾನದ ಮೇಲೆ ಹಲವು ಆಟಗಾರರು ಕಣ್ಣು ನೆಟ್ಟಿದ್ದಾರೆ. ಆದರೆ ಬಹುವಾಗಿ ಕೇಳಿ ಬರುತ್ತಿರುವ ಹೆಸರು ಶುಭಮನ್ ಗಿಲ್. ಭರವಸೆಯ ಟೀಮ್ ಇಂಡಿಯಾದ ಆಟಗಾರ ಈಗಾಗಲೇ ತಮ್ಮಲ್ಲಿರುವ ಬ್ಯಾಟಿಂಗ್ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. ಅಲ್ಲದೆ ನಾಯಕತ್ವದ ಗುಣಗಳನ್ನು ಸಹ ತೋರಿಸಿದ್ದಾರೆ. ಹೀಗಾಗಿ ಇವರತ್ತ ಹೆಚ್ಚಿನವರ ಕಣ್ಣು ನೆಟ್ಟಿದೆ.
ಯಶಸ್ವಿ ಜೈಸ್ವಾಲ್, ಕನ್ನಡಿಗ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್ ಬ್ಯಾಟಿಂಗ್ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸಾಯಿ ಸುದರ್ಶನ್ ಅವರಿಗೂ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ವಿಕೆಟ್ ಕೀಪರ್ಗಳಾಗಿ ರಿಷಭ್ ಪಂತ್, ಧ್ರುವ್ ಜುರೇಲ್ ತಂಡ ಸೇರಿಕೊಳ್ಳುವ ಸಂಭವ ಹೆಚ್ಚಿದೆ. ಆಲ್ರೌಂಡರ್ ರೂಪದಲ್ಲಿ ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ ಸ್ಥಾನ ಕನ್ಫರ್ಮ್ ಎನ್ನಲಾಗುತ್ತಿದೆ.

ಟೀಮ್ ಇಂಡಿಯಾದ ಬ್ಯಾಟಿಂಗ್ಗೆ ಹೋಲಿಸಿದರೆ ಬೌಲಿಂಗ್ ವಿಭಾಗ ಕೊಂಚ ಬಲಿಷ್ಠವಾಗಿ ಇರುವಂತೆ ಕಾಣುತ್ತದೆ. ಬೌಲಿಂಗ್ ವಿಭಾಗನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದಾರೆ. ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ತಂಡದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಇನ್ನು ಪ್ರಸಕ್ತ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿರುವ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ಪ್ರವಾಸದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ನುರಿತ ಸ್ಪಿನ್ ಬೌಲರ್ ಆಗಿ ಕುಲ್ದೀಪ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ಸಂಭಾವ್ಯ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್,