ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಕನಸು ಕಾಣುತ್ತಿದೆ. ಹಾಗಿದ್ದರೆ, ಎರಡನೇ ಟೆಸ್ಟ್ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಕೆಂಪು ಮಣ್ಣಿನ ಪಿಚ್ ಮೇಲೆ ಆಡಿಸಲಾಗಿತ್ತು. ಹೀಗಾಗಿ ಮೊದಲ ಟೆಸ್ಟ್ನಲ್ಲಿ ಮೂವರು ವೇಗಿಗಳು ಅಂಗಳ ಪ್ರವೇಶಿಸಿದ್ದರು. ಎರಡನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಸಂಯೋಜನೆ ಏನಿರಲಿದೆ ಎಂಬ ಕುತೂಹಲ ಮನೆ ಮಾಡಿದೆ. ಎರಡನೇ ಟೆಸ್ಟ್ ಕೆಂಪು ಮಣ್ಣಿನ ಪಿಚ್ ಮೇಲೆ ನಡೆಯುತ್ತದೋ, ಕಪ್ಪು ಮಣ್ಣಿನ ಪಿಚ್ ಮೇಲೆ ನಡೆಯುತ್ತದೋ ಎಂಬ ಚರ್ಚೆಗಳು ಸಹ ಆರಂಭವಾಗಿವೆ.

ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ, ಕಾನ್ಪುರ್ ಪಿಚ್ ಕಪ್ಪು ಮಣ್ಣಿನ್ನದಾಗಿದೆ. ಈ ಪಿಚ್ನಲ್ಲಿ ಪಂದ್ಯವು ನಡೆದಂತೆ ಬೌನ್ಸ್ ಕಡಿಮೆ ಇರುತ್ತದೆ ಎಂದು ನಂಬಲಾಗಿದೆ. ಈ ಪಿಚ್ ಚೆನ್ನೈ ಪಿಚ್ಗೆ ಹೋಲಿಸಿದರೆ, ತುಂಬ ಭಿನ್ನವಾಗಿರಲಿದೆ. ಹೀಗಾಗಿ ಈ ಪಿಚ್ ಕೊಂಚ ಸ್ಪಿನ್ ಬೌಲರ್ಗಳಿಗೆ ನೆರವು ನೀಡುವ ಸಾಧ್ಯತೆ ಹೆಚ್ಚಿದೆ. ಇದನ್ನು ಪರಿಗಣಿಸಿ ಭಾರತ ತಂಡದ ಸಂಯೋಜನೆಯನ್ನು ಮಾಡಲಿದೆ. ಚೆನ್ನೈನಲ್ಲಿ ಸ್ಪಿನ್ನರ್ಗಳು ಹಾಗೂ ವೇಗದ ಬೌಲರ್ಗಳಿಗೆ ಸಹಾಯ ನೀಡಿತ್ತು.
ಭಾರತ ತಂಡ 2021 ರಲ್ಲಿ ಕಾನ್ಪುರದಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿತ್ತು. ಮೂರು ವರ್ಷಗಳ ನಂತರ ಕಾನ್ಪುರದಲ್ಲಿ ಮತ್ತೊಮ್ಮೆ ಟೆಸ್ಟ್ ಪಂದ್ಯ ಆಡಲಾಗುತ್ತಿದೆ. ಈ ಮೈದಾನದಲ್ಲಿ ಭಾರತ ಇದುವರೆಗೆ ಒಟ್ಟು 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7ರಲ್ಲಿ ಗೆದ್ದು 3ರಲ್ಲಿ ಸೋತಿದೆ. 13 ಪಂದ್ಯಗಳು ಡ್ರಾ ಆಗಿವೆ.
ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಸಂಯೋಜನೆ ಹೇಗಿರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕಪ್ಪು ಮಣ್ಣಿನ ಪಿಚ್ ಆಗಿರುವುದರಿಂದ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಇನ್ನು ಮೊದಲ ಟೆಸ್ಟ್ನಲ್ಲಿ ಮೊನಚಾದ ದಾಳಿ ನಿರ್ವಹಿಸಿದ್ದ ಜಸ್ಪ್ರಿತ್ ಬುಮ್ರಾ ಅವರಿಗೆ ಎರಡನೇ ಟೆಸ್ಟ್ನಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ತಂಡದ ಬೌಲಿಂಗ್ ನೊಗವನ್ನು ಹೊರಬಹುದಾಗಿದೆ.

ಎರಡನೇ ಟೆಸ್ಟ್ ಪಂದ್ಯ ಸ್ಪಿನ್ ಬೌಲರ್ಗಳಿಗೆ ನೆರವು ನೀಡುವ ಸಾಧ್ಯತೆ ಇದ್ದು, ಭಾರತ ಮೂವರು ಸ್ಪಿನ್ ಬೌಲರ್ಗಳೊಂದಿಗೆ ಕಣಕ್ಕೆ ಇಳಿಯಬಹುದು. ಅನುಭವಿ ಅಶ್ವಿನ್, ಜಡೇಜಾ ಜೊತೆಗೆ ಇನ್ನೊಬ್ಬ ಸ್ಪಿನ್ ಬೌಲರ್ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅಂದಹಾಗೆ ತವರಿನಲ್ಲಿ ಮೊದಲ ಟೆಸ್ಟ್ ಆಡಲು ಕುಲ್ದೀಪ್ ಯಾದವ್ ತಯಾರಿ ನಡೆಸಿದ್ದರೆ, ಅಕ್ಷರ್ ಪಟೇಲ್ ಸಹ ತಂಡ ಸೇರುವ ಕನಸಿನಲ್ಲಿದ್ದಾರೆ. ಒಂದೇ ಸ್ಥಾನಕ್ಕಾಗಿ ಇಬ್ಬರ ಫೈಟ್ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ.