
ನವದೆಹಲಿ, ಅಕ್ಟೋಬರ್ 9: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರ ಬಿದ್ದಿದ್ದಾರೆ. ಅವರ ಬಲಗಾಲಿನ ಬೆರಳಿಗೆ ಗಾಯವಾಗಿರುವುದರಿಂದ ಬುಧವಾರ (ಅಕ್ಟೋಬರ್ 9) ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಮೃತಿ ಪಾಲ್ಗೊಳ್ಳುತ್ತಿಲ್ಲ.
ಅಭ್ಯಾಸದ ವೇಳೆ ಚೆಂಡು ಕಾಲಿಗೆ ಬಡಿದು ಸ್ಮೃತಿ ಮಂಧಾನ ಗಾಯಗೊಂಡು ಸರಣಿಯಿಂದ ಹೊರ ಬಿದ್ದಿರುವುದನ್ನು ಬಿಸಿಸಿಐ ಖಾತರಿಪಡಿಸಿದೆ. ಮಂಧಾನ ಬದಲಿಗೆ 20ರ ಹರೆಯದ ವೇಗಿ ಬೌಲರ್, ಆಲ್ ರೌಂಡರ್ ಪೂಜಾ ವಸ್ತ್ರಾಕಾರ್ ಅವರನ್ನು ತಂಡದಲ್ಲಿ ಹೆಸರಿಸಲಾಗಿದೆ.
ಬಿಸಿಸಿಐ ವೈದ್ಯಕೀಯ ತಂಡ ಮಂಧಾನ ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಿದ್ದು, ಭಾರತದ ವನಿತಾ ತಂಡದ ಮುಂದಿನ ಸರಣಿಯಲ್ಲಿ ಸ್ಮೃತಿ ಪಾಲ್ಗೊಳ್ಳುತ್ತಾರೋ ಇಲ್ಲವೊ ಎಂಬ ಬಗ್ಗೆ ಖಾತ್ರಿಯಿಲ್ಲ. ಮಹಿಳಾ ತಂಡ ಅಕ್ಟೋಬರ್ 23ರಂದು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತೆರಳಲಿದೆ.
ಏಕದಿನ ಸರಣಿಗೆ ತಂಡದ ನಾಯಕತ್ವ ವಹಿಸಿರುವ ಮಿಥಾಲಿ ರಾಜ್, ಮಂಧಾನ ಅನುಪಸ್ಥಿತಿ ಬೇರೆ ಯುವ ಆಟಗಾರರಿಗೆ ಅವಕಾಶ ಒದಗಿಸಲಿದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ 4 ಪಂದ್ಯಗಳಲ್ಲಿ ಆಡಿದ್ದ ಸ್ಮೃತಿ ಕ್ರಮವಾಗಿ 21, 13, 7, 5 ರನ್ ಬಾರಿಸಿದ್ದರು.