ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಗಾಯದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ. ಸಿಡ್ನಿ ಮೈದಾನದಲ್ಲಿ ಕ್ಯಾಚ್ ಹಿಡಿಯುವಾಗ ಗಾಯಕ್ಕೆ ತುತ್ತಾಗಿದ್ದ ಶ್ರೇಯಸ್ ಅವರನ್ನು ಸಿಡ್ನಿಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಲ್ಲದೆ ಇವರು ಸದ್ಯ ತೀವ್ರ ನಿಗಾ ಘಟಕದಲ್ಲಿ (ICU) ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಚ್ ಹಿಡಿಯುವಾಗ ಆದ ಗಾಯದಿಂದ ದೇಹದಲ್ಲಿ ರಕ್ತ ಸ್ರಾವ (Internal Bleeding) ಆದ ಬಗ್ಗೆ ತಿಳಿದು ಬಂದಿದೆ.
ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವಾಗ ಅಲೆಕ್ಸ್ ಕ್ಯಾರಿ ಹರ್ಷಿತ್ ರಾಣಾ ಅವರ ಎಸೆತವನ್ನು ಬ್ಯಾಕ್ ವರ್ಡ್ ಪಾಯಿಂಟ್ಗೆ ಬಾರಿಸಿದರು. ಶ್ರೇಯಸ್ ಅಯ್ಯರ್ ಓಡುತ್ತಾ ಬಂದು ಅದ್ಭುತ ಕ್ಯಾಚ್ ಪಡೆದರು. ಈ ವೇಳೆ ಕ್ಯಾಚ್ ಪಡೆದ ಬಳಿಕ ಎಡ ಪಕ್ಕೆಲುಬಿಗೆ ಗಾಯ ಮಾಡಿಕೊಂಡರು. ನಂತರ ಅವರನ್ನು ಡ್ರೆಸ್ಸಿಂಗ್ ರೂಮ್ಗೆ ಕರೆದೊಯ್ಯಲಾಯಿತು. ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಶ್ರೇಯಸ್ ಅಯ್ಯರ್ ಅವರ ಗಾಯದ ಬಗ್ಗೆ ಬಿಸಿಸಿಐ ಮೂಲವೊಂದು ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದೆ. ಶ್ರೇಯಸ್ ಅಯ್ಯರ್ ಕಳೆದ ಕೆಲವು ದಿನಗಳಿಂದ ಐಸಿಯುನಲ್ಲಿದ್ದಾರೆ. ವರದಿಯಲ್ಲಿ ಆಂತರಿಕ ರಕ್ತ ಸ್ರಾವದ ಪತ್ತೆಯಾಗಿದ್ದು, ಬಳಿಕ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ದೇಹದಲ್ಲಿ ರಕ್ತಸ್ರಾವದಿಂದ ಸೋಂಕು ಹರಡದಂತೆ ತಡೆಯುವುದು ಮುಖ್ಯ ಕಾರಣ. ಅವರ ಚೇತರಿಕೆಯನ್ನು ಅವಲಂಬಿಸಿ 2 ರಿಂದ 7 ದಿನ ವೀಕ್ಷಣೆಯಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ಅವರ ಪೋಷಕರನ್ನು ಸಹ ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗುವ ತಯಾರಿಗಳು ನಡೆದಿವೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಇನ್ನು ಸ್ಪಷ್ಟತೆ ಸಿಗಬೇಕಿದೆ. ಟೀಮ್ ಇಂಡಿಯಾದ ಉಪನಾಯಕ ಅಯ್ಯರ್ ಗಾಯಕ್ಕೆ ತುತ್ತಾಗಿರುವುದು ನಿಜಕ್ಕೂ ಭಾರತ ತಂಡಕ್ಕೆ ಪೆಟ್ಟು ಬಿದ್ದಿದೆ. ಇವರು ಭಾರತದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ವೇಳೆಗೆ ಫಿಟ್ ಆಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಒಂದು ವೇಳೆ ಇವರು ಫಿಟ್ ಆದಲ್ಲಿ ಬೆಂಗಳೂರಿನಲ್ಲಿರುವ ಸೆಂಟ್ರಲ್ ಎಕ್ಸ್ಲೆನ್ಸ್ನಿಂದ ಒಪ್ಪಿಗೆ ಪಡೆದೇ ಮೈದಾನಕ್ಕೆ ಇಳಿಯಬೇಕಾಗುತ್ತದೆ.
ಶ್ರೇಯಸ್ ಅಯ್ಯರ್ ಪ್ರಸಕ್ತ ವರ್ಷ ಭರ್ಜರಿ ಫಾರ್ಮ್ನಲ್ಲಿದ್ದು, ಇವರ ಪರಿಶ್ರಮಕ್ಕೆ ಬಿಸಿಸಿಐ ಗಿಫ್ಟ್ ಸಹ ನೀಡಿತ್ತು. ಇವರಿಗೆ ಏಕದಿನ ತಂಡದ ಉಪನಾಯಕನನ್ನಾಗಿ ನೇಮಕ ಮಾಡಿತ್ತು. ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ಶ್ರೇಯಸ್, ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು.