'ಚಿನ್ನಸ್ವಾಮಿ'ಯಲ್ಲಿನ ತಂತ್ರಜ್ಞಾನಕ್ಕೆ ಮನಸೋತ ಗಂಭೀರ್
ಬೆಂಗಳೂರು, ಮೇ 18: ಬುಧವಾರ ರಾತ್ರಿ ನಡೆದ ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ತಮ್ಮ ತಂಡ ಜಯ ಸಾಧಿಸಿದ್ದಕ್ಕಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ ಸಿಎ) ಧನ್ಯವಾದ ಅರ್ಪಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಸಬ್ ಏರ್ ಸಿಸ್ಟಂ ನಿಂದಾಗಿ ಪಂದ್ಯ ರದ್ದಾಗಲಿಲ್ಲ. ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಮಾತ್ರವೇ ಪಂದ್ಯಕ್ಕೆ ಅಡ್ಡಿಯಾಗಿದ್ದ ಮೈದಾನದ ನೀರನ್ನು ಹೊರಹಾಕಲು ಸಾಧ್ಯವಾಯಿತು ಹಾಗೂ ನಾವು (ಕೋಲ್ಕತಾ) ಗೆಲ್ಲಲು ಸಾಧ್ಯವಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.[ಚಿನ್ನಸ್ವಾಮಿ ಸ್ಟೇಡಿಯಂಗಿನ್ನು ಮಳೆಯ ಬಾಧೆಯಿಲ್ಲ!]
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್ ರೈಸರ್ಸ್ 128 ರನ್ ಗಳ ಮೊತ್ತ ದಾಖಲಿಸಿತ್ತು. ಆನಂತರ, ಬ್ಯಾಟಿಂಗ್ ಗೆ ಇಳಿದಿದ್ದ ಕೋಲ್ಕತಾ ಕೇವಲ 12 ರನ್ ಮೊತ್ತಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಆಗ, ಮಳೆ ಬಂದು ಅಡಚಣೆಯುಂಟಾಗಿತ್ತು.
ಪಂದ್ಯ ಪುನರಾರಂಭವಾದಾಗ ಡಕ್ವರ್ತ್ ಲೂಯಿಸ್ ನಿಯಮಗಳ ಅನುಸಾರ, 6 ಓವರ್ ಗಳಲ್ಲಿ ಗೆಲುವಿಗಾಗಿ 48 ರನ್ ಪೇರಿಸುವ ಸವಾಲು ಪಡೆದ ಕೋಲ್ಕತಾ ಪಂದ್ಯದಲ್ಲಿ ಯಶಸ್ವಿಯಾಗಿ ಗುರಿ ಮುಟ್ಟಿತು. ಆದರೆ, ಈ ಗೆಲುವಿಗೆ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣ ಎಂದಿದ್ದಾರೆ ಅವರು.

ಮೈದಾನದಲ್ಲಿ ನೀರಿನ ರಾಡಿ
ಗೌತಮ್ ಹೀಗೆ ಮೆಚ್ಚುಗೆ ವ್ಯಕ್ತಪಡಿಸಲೂ ಒಂದು ಕಾರಣವಿದೆ. ಏಕೆಂದರೆ, ಪಂದ್ಯದಲ್ಲಿ ಮೊದಲು ಸನ್ ರೈಸರ್ಸ್ ಬ್ಯಾಟಿಂಗ್ ಮಾಡಿತ್ತು. ಅವರ ಇನಿಂಗ್ಸ್ ಮುಗಿದು ಕೋಲ್ಕತಾ ಇನಿಂಗ್ಸ್ ಶುರುವಾಗಿ ಕೆಲ ಹೊತ್ತಿಗೇ ಮಳೆ ಆರಂಭವಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಇಡೀ ಮೈದಾನ ನೀರಿನ ರಾಡಿಯಿಂದ ಆವರಿಸಿತು.

ಶುರುವಾಯ್ತು ಆಟ
ಆದರೆ, ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ವ್ಯವಸ್ಥೆಯಿಂದಾಗಿ ಮಳೆ ನಿಂತ ನಂತರ ಸುಮಾರು 20ರಿಂದ 30 ನಿಮಿಷದೊಳಗೆ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಯಿತು.

ಅಚ್ಚುಕಟ್ಟಾದ ವ್ಯವಸ್ಥೆ
ಮೈದಾನದ ಹುಲ್ಲು ಹಾಸಿನ ಕೆಳಗೆ ಅಳವಡಿಸಲಾಗಿರುವ ಪೈಪುಗಳಿಂದಾಗಿ, ಇಡೀ ಕ್ರೀಡಾಂಗಣದ ನೀರನ್ನು ಹೀರಿಕೊಂಡು ಕ್ರೀಡಾಂಗಣದಿಂದ ಹೊರಹಾಕುವ ವಿಶಿಷ್ಟವಾದ ಸೌಲಭ್ಯ ಈ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಭಾರತದಲ್ಲಿ ಕ್ರಿಕೆಟ್ ಕ್ರೀಡಾಂಗಣವೊಂದಕ್ಕೆ ಇಂಥ ವ್ಯವಸ್ಥೆ ಅಳವಡಿಸಿರುವುದು ಇಲ್ಲೇ ಮೊದಲು.
ಈ ಕಾರಣದಿಂದಾಗಿಯೇ ಬುಧವಾರ ನಡೆದ ಕೋಲ್ಕತಾ ಮತ್ತು ಸನ್ ರೈಸರ್ಸ್ ನಡುವಿನ ಪಂದ್ಯವು ರದ್ದಾಗುವುದನ್ನು ತಡೆದು ಮಳೆ ನಿಂತ ಪಂದ್ಯವನ್ನು ಪುನರಾರಂಭಿಸಲಾಯಿತು.

ರದ್ದಾಗಿದ್ದರೆ ಕೋಲ್ಕತಾಕ್ಕೆ ಹಿನ್ನಡೆ ಆಗುತ್ತಿತ್ತು
ಈ ಪಂದ್ಯವೇನಾದರೂ ಬೇರೆ ಕ್ರೀಡಾಂಗಣದಲ್ಲಿ ನಡೆದು, ಅಲ್ಲಿ ಹೀಗೆಯೇ ಮೂರು ಗಂಟೆಗಳ ಕಾಲ ಮಳೆ ಸುರಿದಿದ್ದರೆ ಪಂದ್ಯವು ರದ್ದಾಗುವ ಅವಕಾಶವೇ ಹೆಚ್ಚಿರುತ್ತಿತ್ತು. ಹಾಗೆ ಪಂದ್ಯ ರದ್ದಾಗಿದ್ದರೆ, ಸನ್ ರೈಸರ್ಸ್ ತಂಡವು ಅಂಕಗಳಿಕೆಯಲ್ಲಿ ಏರಿಕೆ ಕಂಡು, ಕೋಲ್ಕತವನ್ನು ಹಿಂದಿಕ್ಕಿ ಫೈನಲ್ ಗೆ ಕಾಲಿಡುತ್ತಿತ್ತು.

ಗಂಭೀರ್ ಮನಸ್ಸಿನಲ್ಲಿ ಕೃತಜ್ಞತೆ ಮೂಡಿಸಿತು
ಅಂಥದ್ದೊಂದು ಸೋಲು ಅನುಭವಿಸುವುದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ವ್ಯವಸ್ಥೆ ತಪ್ಪಿಸಿದ್ದಕ್ಕೆ ಗೌತಮ್ ಗಂಭೀರ್ ಅವರು ಸಹಜವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications