ಪುಣೆ, ಏಪ್ರಿಲ್ 7: ಕೂಲ್ ಕ್ಯಾಪ್ಟನ್ ಧೋನಿ ಅದೆಂಥಾ ಕೂಲ್ ಮನುಷ್ಯ ಎಂದರೆ, ತನ್ನ ವಿರುದ್ಧದ ಟೀಕೆಗಳನ್ನೂ ಹಾಸ್ಯ ಪ್ರಜ್ಞೆಯಿಂದ ನಿಭಾಯಿಸುವ ಚತುರ.
ಇದಕ್ಕೆ, ಗುರುವಾರ (ಏಪ್ರಿಲ್ 7) ರಾತ್ರಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಜರುಗಿದ ಪ್ರಸಂಗವೇ ಸಾಕ್ಷಿ. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರವಾಗಿ ಧೋನಿ ಕೀಪಿಂಗ್ ಮಾಡುತ್ತಿದ್ದಾಗ, ಕಾಮೆಂಟರಿ ಬಾಕ್ಸ್ ನಲ್ಲಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ವೀಕ್ಷಕ ವಿವರಣೆ ನೀಡುತ್ತಿದ್ದರು.[ಸ್ಮಿತ್ ಭರ್ಜರಿ ಆಟ, ಮುಂಬೈ ವಿರುದ್ಧ ಪುಣೆಗೆ ಜಯ]

ಅದೊಂದು ಘಳಿಗೆಯಲ್ಲಿ, ಮೈದಾನದಲ್ಲಿ ಮೊದಲ ಸ್ಲಿಪ್ ನಲ್ಲಿದ್ದ ಮನೋಜ್ ತಿವಾರಿಯಲ್ಲಿ ಕಿವಿಯಲ್ಲಿದ್ದ ಮೈಕ್ರೋ ಫೋನ್ ನೊಂದಿಗೆ ಸಂಪರ್ಕದಲ್ಲಿದ್ದ ಕೆವಿನ್, ''ಧೋನಿಗೆ ಹೇಳು.... ನಾನು (ಕೆವಿನ್) ಧೋನಿಗಿಂತ ಉತ್ತಮ ಗಾಲ್ಫರ್ ಅಂತ'' ಎಂದು ತಿಳಿಸಿದರು.
ಕೆವಿನ ಹೇಳಿದ್ದನ್ನು ಕೆಲ ಕ್ಷಣಗಳ ತರುವಾಯ ತಿವಾರಿ, ಧೋನಿ ತಿಳಿಸಿದರು. ಇದರಿಂದ ಹಸನ್ಮುಖರಾದ ಧೋನಿ, ''ಕೆವಿನ್ ಈಗಲೂ ನನ್ನ ಮೊದಲ ಟೆಸ್ಟ್ ವಿಕೆಟ್'' ಎಂದು ಬಿಟ್ಟರು. ಇದನ್ನು ಕೇಳಿದ ಕೂಡಲೇ, ಕೆವಿನ್ ಅವರು, ಗಹಗಹಿಸಿ ನಕ್ಕರು. ಮೈದಾನದಲ್ಲಿ ತಿವಾರಿ, ಧೋನಿ ಸಹ ಮುಗುಳ್ನಕ್ಕರು.[ಮುಂಬೈ ಇಂಡಿಯನ್ಸ್ ಸೋಲಿಗೆ 5 ಪ್ರಮುಖ ಕಾರಣಗಳು]
ಧೋನಿ ಹೇಳಿದ ಈ ಮಾತಿನ ಹಿಂದೆ ವೃತ್ತಾಂತವೊಂದಿದೆ. ಸಾಮಾನ್ಯವಾಗಿ ವಿಕೆಟ್ ಕೀಪಿಂಗ್ ಮಾಡುವವರು ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದಿಲ್ಲ. ಆದರೆ, 2011ರಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವೇಗಿ ಜಹೀರ್ ಖಾನ್ ಗಾಯಗೊಂಡರು.
ಹಾಗಾಗಿ, ಅವರ ಬೌಲಿಂಗ್ ನಿಭಾಯಿಸುವ ಅನಿವಾರ್ಯತೆಗೆ ಸಿಲುಕಿದ ವಿಕೆಟ್ ಕೀಪರ್-ಕಂ- ಬ್ಯಾಟ್ಸ್ ಮನ್ ಧೋನಿ, ರಾಹುಲ್ ದ್ರಾವಿಡ್ ಅವರನ್ನು ಕೀಪಿಂಗ್ ಗೆ ನಿಲ್ಲಿಸಿ ತಾವು ಬೌಲಿಂಗ್ ಗೆ ಇಳಿದಿದ್ದರು. ಅವರ ಒಂದು ಎಸೆತದಲ್ಲಿ ಕೆವಿನ್ ಪೀಟರ್ಸನ್ ಅವರು ಕೀಪರ್ ದ್ರಾವಿಡ್ ಗೆ ಕ್ಯಾಚಿತ್ತಂತೆ ಭಾಸವಾಗಿ ಅಂಪೈರ್ ಬಿಲ್ಲಿ ಬೌಡೆನ್ ಔಟ್ ಎಂದು ತೀರ್ಪಿತ್ತಿದ್ದರು. ಆದರೆ, ಡಿಆರ್ ಎಸ್ ಮೊರೆಗೆ ಹೋದ ಪೀಟರ್ಸನ್ ನಾಟೌಟ್ ಎಂಬ ತೀರ್ಪು ಪಡೆದರು.[ಸರಿಯಾಗಿ ಚೆಚ್ಚಿಸಿಕೊಂಡ್ರೂ ದಾಖಲೆ ಬರೆದ ವೇಗಿ ದಿಂಡಾ!]
ಹಾಗೆಯೇ, ತಮ್ಮ ಬ್ಯಾಟಿಂಗ್ ಮುಂದುವರಿಸಿ ದ್ವಿಶತಕ ಬಾರಿಸಿದರಲ್ಲದೆ, ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಧೋನಿ, ಟೆಸ್ಟ್ ಕ್ರಿಕೆಟ್ ನಲ್ಲಿ ಬಂದಿದ್ದ ಏಕೈಕ ವಿಕೆಟ್ ಕೈ ತಪ್ಪಿ ಹೋಯಿತು. ಇದನ್ನೇ ಧೋನಿಯವರು ಸೂಚ್ಯವಾಗಿ, ಕೆವಿನ್ ಈಗಲೂ ನನ್ನ ಮೊದಲ ಟೆಸ್ಟ್ ವಿಕೆಟ್ ಎಂದಿದ್ದು.
ಅಂದಹಾಗೆ, ಧೋನಿಯವರು ಏಕದಿನ ಪಂದ್ಯದಲ್ಲಿ ಏಕೈಕ ವಿಕೆಟ್ (ವೆಸ್ಟ್ ಇಂಡೀಸ್ ನ ಟ್ರಾವಿಸ್ ಡೌಲಿನ್) ಪಡೆದಿದ್ದಾರೆ.