ಪ್ಲೇ ಆಫ್ ನಲ್ಲಿ ಸೋತ ಮುಂಬೈ ಎಡವಿದ್ದೆಲ್ಲಿ? ಇಲ್ಲಿವೆ 5 ಕಾರಣ
ಮುಂಬೈ, ಮೇ 17: ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭದಿಂದಲೂ ಬೆರಳೆಣಿಕೆಯ ಪಂದ್ಯಗಳನ್ನು ಬಿಟ್ಟು ಮಿಕ್ಕಿದ್ದರಲ್ಲೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದ ಮುಂಬೈ ತಂಡ, ಮಂಗಳವಾರ ರಾತ್ರಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಸೋತಿದ್ದಾದರೂ ಹೇಗೆ ಎಂಬುದು ಆ ತಂಡದ ಅಭಿಮಾನಿಗಳನ್ನು ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ!
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವು, ನಿಗದಿತ 20 ಓವರ್ ಗಳಲ್ಲಿ 162 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ, 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಮಾತ್ರ ಗಳಿಸಿ, 20 ರನ್ ಗಳ ಸೋಲು ಕಂಡಿತು.
ಆದರೂ, ಪರವಾಗಿಲ್ಲ. ಇದೇ ಶುಕ್ರವಾರ (ಮೇ 19) ಬೆಂಗಳೂರಿನಲ್ಲಿ ನಡೆಯಲಿರುವ ಮತ್ತೊಂದು ಪ್ಲೇ ಆಫ್ ಪಂದ್ಯದಲ್ಲಿ ಆಡಲಿರುವ ಮುಂಬೈಗೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಆದರೆ, ಅಲ್ಲೂ ಇಲ್ಲಿ ಮಾಡಿದಂಥ ತಪ್ಪುಗಳನ್ನೇ ಪುನರಾವರ್ತಿಸಿದಲ್ಲಿ ಸೋಲು ಗ್ಯಾರಂಟಿ. ಅದಕ್ಕಿಂತ ಮಿಗಿಲಾಗಿ ಫೈನಲ್ ಗೆ ಹೋಗುವ ಅವಕಾಶ ತಪ್ಪೋದಂತೂ ಗ್ಯಾರಂಟಿ.
ನಮಗೆಲ್ಲಾ ಗೊತ್ತಿರುವಂತೆ, ಮುಂಬೈ ಪಡೆ ಸಾಮಾನ್ಯ ಆಟಗಾರರನ್ನೇನೂ ಹೊಂದಿಲ್ಲ. ಅದರ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ. ಆರಂಭಿಕರಾದ ಲೆಂಡಲ್ ಸೈಮಂಡ್ಸ್, ಪಾರ್ಥೀವ್ ಪಟೇಲ್, ರೋಹಿತ್ ಶರ್ಮಾ, ರಾಯುಡು, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಮೆಕ್ಲೆನಾಘನ್... ಹೀಗೆ ದೈತ್ಯ ದಾಂಡಿಗರ ದಂಡೇ ಇದೆ ಆ ತಂಡದಲ್ಲಿ.
ಇನ್ನು, ತವರಿನ ನೆಲದಲ್ಲೇ ಆ ಪಂದ್ಯವಾಗಿದ್ದು. ಅಂದ ಮೇಲೆ ಕೇಳಬೇಕೇ? ತನ್ನ ಪಿಚ್ ನ ಅನುಕೂಲತೆಗಳು, ಅನಾನುಕೂಲತೆಗಳನ್ನು ಚೆನ್ನಾಗಿ ಬಲ್ಲಂಥ ತಂಡವೊಂದು ಇಂಥ ಮಹತ್ವದ ಪಂದ್ಯದಲ್ಲಿ ಚೇಸಿಂಗ್ ವೇಳೆ ಗೆಲ್ಲಲಾಗಲಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ವಿಚಾರ. ಹೀಗೆ, ತವರಿನ ಲಾಭ ಪಡೆಯದ ಮುಂಬೈ ತಂಡ ಎಡವಿದ್ದೆಲ್ಲಿ ಎಂಬುದರ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.(ಚಿತ್ರ ಕೃಪೆ: www.iplt20.com)

ಪ್ರಯೋಜನ ಪಡೆಯದ ಬೌಲರ್ ಗಳು
ಟಾಸ್ ಗೆದ್ದಿದ್ದ ಮುಂಬೈ ತಂಡ, ಮೊದಲು ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದ್ದು ತಪ್ಪೇನಲ್ಲ. ಅಂದಿನ ಪಿಚ್ ವರದಿಗಳ ಪ್ರಕಾರ, ಟಾಸ್ ಗೆದ್ದವರು ಚೇಸಿಂಗ್ ಆಯ್ಕೆ ಮಾಡಿಕೊಳ್ಳಬೇಕಿತ್ತು. ಅದರಂತೆ, ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ನಡೆದುಕೊಂಡರು. ಆದರೆ, ಮುಂಬೈ ತಂಡದ ಬೌಲರ್ ಗಳು ಅದನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲಿಲ್ಲ.

ಮರೀಚಿಕೆಯಾದ ಬೌಲಿಂಗ್ ಮೊನಚು
ಮುಂಬೈ ತಂಡದ ಆಣತಿಯಂತೆ ಮೊದಲು ಬ್ಯಾಟಿಂಗ್ ಗೆ ಇಳಿದ ಪುಣೆ ತಂಡ ಕೇವಲ 10 ರನ್ ಮೊತ್ತಕ್ಕೆ ಆರಂಭಿಕ ರಾಹುಲ್ ತ್ರಿಪಾಠಿ ಹಾಗೂ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಕಳೆದುಕೊಂಡಿದ್ದನ್ನು ಗಮನಿಸಿದಾಗ, ಮುಂಬೈ ತಂಡದ ನಾಯಕ ರೋಹಿತ್ ಅವರು ಮೊದಲು ಫೀಲ್ಡ್ ಮಾಡುವ ನಿರ್ಧಾರ ಹೆಚ್ಚು ಸಮಂಜಸ ಎನ್ನಿಸತೊಡಗಿತ್ತು. ಆದರೆ, ಈ ಆರಂಭಿಕ ಯಶಸ್ಸನ್ನು ಮುುಂಬೈ ತಂಡದ ಬೌಲರ್ ಗಳು ಉಳಿಸಿಕೊಳ್ಳಲಿಲ್ಲ.

ಮುಂಬೈಗೆ ಯಡವಟ್ಟಾಗಿದ್ದು ಇಲ್ಲೇ!
ಕೇವರ 10 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಮುಂಬೈ ತಂಡವನ್ನು ಬೇಗನೇ ಕಟ್ಟಿಹಾಕುವ ಸನ್ನಾಹದಲ್ಲಿ ಮುಂಬೈ ತಂಡದ ಬೌಲರ್ ಗಳಿದ್ದರೂ, ಅವರ ಯೋಜನೆಯನ್ನು ಭಗ್ನವಾಗಿಸಿದ್ದು ಪುಣೆ ತಂಡದ ಮಧ್ಯಮ ಕ್ರಮಾಂಕದ ಆಟಗಾರರಾದ ಮನೋಜ್ ತಿವಾರಿ ಹಾಗೂ ಮಹೇಂದ್ರ ಸಿಂಗ್ ಧೋನಿ. ಈ ಜೋಡಿ, 4ನೇ ವಿಕೆಟ್ ಗಾಗಿ 7.2 ಓವರ್ ಗಳಲ್ಲಿ 73 ರನ್ ಪೇರಿಸಿತು. ಇಲ್ಲೇ ನೋಡಿ ಮುಂಬೈ ತಂಡಕ್ಕೆ ಎಡವಟ್ಟಾಗಿದ್ದು! ಇಲ್ಲಿ ಆರಂಭಿಕ ಆಟಗಾರ ಅಜಿಂಕ್ಯ ರಹಾನೆಯವರ ಅರ್ಧಶತಕ (52 ರನ್, 43 ಎಸೆತ, 5 ಬೌಂಡರಿ, 1 ಸಿಕ್ಸರ್) ಆಟವನ್ನೂ ಮರೆಯುವ ಹಾಗಿಲ್ಲ.

ಭರ್ಜರಿ ಬ್ಯಾಟಿಂಗ್ ನಡೆಸಿದ ಮಾಜಿ ನಾಯಕ
ಮನೋಜ್ ತಿವಾರಿಯನ್ನು ಆಡಲು ಬಿಟ್ಟರೂ, ಧೋನಿಯನ್ನು ಕ್ರೀಸ್ ನಲ್ಲಿ ಗಟ್ಟಿಯಾಗಿ ತಳವೂರಲು ಬಿಡಬಾರದಾಗಿತ್ತು ಮುಂಬೈ ಬೌಲರ್ ಗಳು. ಏಕೆಂದರೆ, ಕ್ರೀಸ್ ನಲ್ಲಿ ಒಮ್ಮೆ ಗಟ್ಟಿಯಾಗಿ ಬೇರೂರಿದರೆ ಅಷ್ಟು ಸುಲಭವಾಗಿ ವಿಕೆಟ್ ಒಪ್ಪಿಸುವ ಆಸಾಮಿಯಲ್ಲ ಧೋನಿ. ಅದರಲ್ಲೂ ಗಟ್ಟಿಯಾಗಿ ನಿಂತರೆ ಲೀಲಾಜಾಲವಾಗಿ ಬ್ಯಾಟ್ ಬೀಸುವ ಧೋನಿ, ಕೇವಲ 26 ಎಸೆತಗಳಲ್ಲಿ ಅಜೇಯ 40 ರನ್ (5 ಸಿಕ್ಸರ್) ಬಾರಿಸಿದ್ದು ಹಾಗೂ ತಿವಾರಿ ಜತೆಗೂಡಿ ಕಡೆಯ ಎರಡು ಓವರ್ ಗಳಲ್ಲಿ 40 ರನ್ ದೋಚಿದ್ದು ಮುಂಬೈಗೆ ಮುಳುವಾಯಿತು.

ಆದರೂ, ಎಡವಿದರು ಬ್ಯಾಟ್ಸ್ ಮನ್ ಗಳು
ಮುಂಬೈ ತಂಡದ ಸಾಮರ್ಥ್ಯವನ್ನು ನೋಡಿದರೆ, ಪುಣೆ ತಂಡ ನೀಡಿದ್ದ 163 ರನ್ ಗಳ ಸವಾಲು ಅಂಥಾ ದೊಡ್ಡದೇನಲ್ಲ. ಏಕೆಂದರೆ, ಮೊದಲ ಹೇಳಿದಂತೆ ಆ ತಂಡದಲ್ಲಿನ ದೈತ್ಯ ಬ್ಯಾಟ್ಸ್ ಮನ್ ಗಳು ಸಾಂಘಿಕ ಪ್ರದರ್ಶನವೊಂದೇ ಸಾಕಿತ್ತು ಆ ಸವಾಲನ್ನು ಧೂಳಿಪಟ ಮಾಡಲು. ಆದರೆ ಅದು ಸಾಧ್ಯವಾಗಲಿಲ್ಲ. ಆರಂಭಿಕ ಅಕ್ಷರ್ ಪಟೇಲ್ 52 ರನ್ ಗಳಿಸಿದ್ದು ಆ ತಂಡದ ಬ್ಯಾಟ್ಸ್ ಮನ್ ಗಳ ಗರಿಷ್ಠ ಸ್ಕೋರ್ ಆದರೆ, ಕೆಳ ಕ್ರಮಾಂಕದ ಬುಮ್ರಾ ಗಳಿಸಿದ 17 ರನ್ , ಮುಂಬೈ ಇನಿಂಗ್ಸ್ ನ 2ನೇ ವೈಯಕ್ತಿಕ ಗರಿಷ್ಠ ಮೊತ್ತ ಎಂದಾಯಿತು. ಘಟಾನುಘಟಿ ಬ್ಯಾಟ್ಸ್ ಮನ್ ಗಳಾದ ಸೈಮ್ಸನ್ಸ್, ರೋಹಿತ್ ಶರ್ಮಾ, ರಾಯುಡು, ಕೀರನ್ ಪೊಲಾರ್ಡ್ ಮುಂತಾದವರು ಗಟ್ಟಿಯಾಗಿ ನಿಲ್ಲಲೇ ಇಲ್ಲ. ಇದು ಮುಂಬೈ ಸೋಲಿಗೆ ಮತ್ತೊಂದು ಕಾರಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications