ಬೆಂಗಳೂರು, ಮೇ 2: ಹೆಚ್ಚಿನ ಐಪಿಎಲ್ ಆವೃತ್ತಿಗಳನ್ನು ಗಮನಿಸಿದಾಗ ಮುಂಬೈ ಆರಂಭದ ಪಂದ್ಯಗಳಲ್ಲಿ ಹಿನ್ನಡೆ ಕಾಣುತ್ತಲೇ ಬಂದು ಅಂತಿಮ, ಅನಿವಾರ್ಯ ಪಂದ್ಯಗಳನ್ನು ಗೆಲ್ಲಲು ಹೆಣಗಾಡಿ ಗೆದ್ದಿದ್ದೂ ನೇಡಿದ್ದೇವೆ, ಸೋತಿದ್ದನ್ನೂ ನೋಡಿದ್ದೇವೆ.
ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 11ನೇ ಆವೃತ್ತಿಯ 31ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ಬೆಂಗಳೂರು ವಿರುದ್ಧ 14ರನ್ ಸೋಲನುಭವಿಸಿತು. ಮತ್ತದೇ ಹಳೇ ರಾಗವನ್ನೇ ಮುಂಬೈ ಹಾಡಿದೆ.
ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿ ಮುಂಬೈಗೆ 168 ರನ್ ಟಾರ್ಗೆಟ್ ನೀಡಿತು. ಆದರೆ ಗುರಿ ಬೆನ್ನಟ್ಟಿದ ಮುಂಬೈ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿ ಆರ್ಸಿಬಿ ಮುಂದೆ ಶರಣಾಯಿತು.
ಬಲಾಡ್ಯ ತಂಡವಾದರೂ ಕೆಲವೊಂದು ಯಡವಟ್ಟುಗಳು ಆರ್ಸಿಬಿ-ಮುಂಬೈ ಪ್ರಮುಖ ಪಂದ್ಯದಲ್ಲಿ ಮುಂಬೈ ಮುಗ್ಗರಿಸೋದಕ್ಕೆ ಕಾರಣ. ಮುಖ್ಯವಾಗಿ ಬ್ಯಾಟಿಂಗ್ ವೈಫಲ್ಯ, ವಿಕೆಟ್ ನಿಲ್ಲಿಸಿಕೊಳ್ಳದ ದೌರ್ಬಲ್ಯ ಮುಂಬೈ ತಂಡವನ್ನು ಕಾಡಿತು.
ಪಾಂಡ್ಯ ಬ್ರದರ್ಸ್ ಬಿಟ್ಟರೆ ಬೇರೆ ಯಾರೂ ಮುಂಬೈಗೆ ಬೆಂಗಾವಲಾಗಿ ನಿಲ್ಲಲಿಲ್ಲ. ಸೂರ್ಯ ನಾರಾಯಣ ಯಾದವ್ (9), ಇಶಾನ್ ಕಿಶನ್ (0), ನಾಯಕ ರೋಹಿತ್ ಶರ್ಮ (0), ಕೀರನ್ ಪೊಲಾರ್ಡ್ (13) ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದಿದ್ದು ಮುಂಬೈಗೆ ಸೋಲಿನ ಕಹಿ ಉಣಿಸಿತು.
ಜೆಪಿ ಡುಮಿನಿ 23 (29), ಬೆನ್ ಕಟ್ಟಿಂಗ್ 12 (6), ಹಾರ್ದಿಕ್ ಪಾಂಡ್ಯ 50 (42), ಕೃಣಾಲ್ ಪಾಂಡ್ಯ 23 (19) ರನ್ ಪೇರಿಸಿ ಮುಂಬೈ ತಂಡವನ್ನು ಗೆಲುವಿನತ್ತ ಸೆಳೆಯುವ ಪ್ರಯತ್ನ ಮಾಡಿದರಾದರೂ ಸ್ಫೋಟಕ ಬ್ಯಾಟಿಂಗ್ ಇಲ್ಲದ ಕಾರಣ ಓವರ್ ಮುಕ್ತಾಯವಾಗುತ್ತಲೇ ಪಂದ್ಯ ಕಠಿಣಗೊಳ್ಳುತ್ತಾ ಬಂತು.
ಮಂಗಳವಾರದ ಪಂದ್ಯದ ಬಳಿಕ ಬೆಂಗಳೂರು ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದ್ದರೆ, ಮುಂಬೈ 7ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇಬೇಕಾದ ಸಂಕಟಕ್ಕೆ ಮುಂಬೈ ಸಿಲುಕಿದೆ.