
ಬೆಂಗಳೂರು, ಮೇ 2: ಬೌಲಿಂಗ್ ದಾಳಿ, ಲೆಕ್ಕಾಚಾರದ ಬ್ಯಾಟಿಂಗ್ ಮತ್ತು ಉತ್ತಮ ಫೀಲ್ಡಿಂಗ್ ಈ ಸಾರಿ ಆರ್ಸಿಬಿ ತಂಡದ ಕೈ ಹಿಡಿಯುತು. 11ನೇ ಐಪಿಎಲ್ ಆವೃತ್ತಿಯ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 14 ರನ್ ಜಯ ಸಾಧಿಸಿತು.
ಸ್ಕೋರ್ ಕಾರ್ಡ್
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಬೆಂಗಳೂರು ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 167 ರನ್ ಪೇರಿಸಿ ಮುಂಬೈಗೆ 168 ರನ್ ಸಾಧಾರಣ ಗುರಿ ನೀಡಿತ್ತು. ಆದರೆ ಮುಂಬೈ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದು 153 ರನ್ ಕಲೆ ಹಾಕಿ ಬೆಂಗಳೂರು ಎದುರು ಸೋಲೊಪ್ಪಿಕೊಂಡಿತು.
ಮನನ್ ವೊಹ್ರಾ 45 (31), ಬ್ರೆಂಡನ್ ಮೆಕಲಮ್ 37 (25), ನಾಯಕ ವಿರಾಟ್ ಕೊಹ್ಲಿ 32 (26), ಕಾಲಿನ್ ಡಿ ಗ್ರ್ಯಾಂಡ್ ಹೋಂ ಅಜೇಯ 23 (10) ರನ್ ಕೊಡುಗೆಯೊಂದಿಗೆ ಬೆಂಗಳೂರು ತಂಡ ಮುಂಬೈಗೆ 168 ರನ್ ಗುರಿ ನೀಡುವಲ್ಲಿ ನೆರವು ನೀಡಿದರು.
ಬ್ಯಾಟಿಂಗ್ ಗೆ ಇಳಿದ ಮುಂಬೈ ಚೇಸಿಂಗ್ ಗೆ ಪ್ರಯತ್ನಿಸಿತಾದರೂ ಬ್ಯಾಟ್ಸ್ಮನ್ ಗಳ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಸೂರ್ಯ ನಾರಾಯಣ ಯಾದವ್ (9), ಇಶಾನ್ ಕಿಶನ್ (0), ನಾಯಕ ರೋಹಿತ್ ಶರ್ಮ (0), ಕೀರನ್ ಪೊಲಾರ್ಡ್ (13) ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದಿದ್ದು ಮುಂಬೈಗೆ ಸೋಲಿನ ಬೆಲೆ ತೆರುವಂತೆ ಮಾಡಿತು.
ಮುಂಬೈ ಪರ ತುಸು ಬ್ಯಾಟ್ ಬೀಸಿದವರೆಂದರೆ ಪಾಂಡ್ಯ ಬ್ರದರ್ಸ್ ಮಾತ್ರ. ಹಾರ್ದಿಕ್ ಪಾಂಡ್ಯ 50 (42), ಕೃಣಾಲ್ ಪಾಂಡ್ಯ 23 (19) ರನ್ ಪೇರಿಸಿ ಮುಂಬೈ ತಂಡವನ್ನು ಗೆಲುವಿನತ್ತ ಸೆಳೆಯುವ ಪ್ರಯತ್ನ ಮಾಡಿದರಾದರೂ ಸ್ಫೋಟಕ ಬ್ಯಾಟಿಂಗ್ ಇಲ್ಲದ ಕಾರಣ ಓವರ್ ಮುಕ್ತಾಯವಾಗುತ್ತಲೇ ಪಂದ್ಯ ಕಠಿಣಗೊಳ್ಳುತ್ತಾ ಬಂತು.
ಎಲ್ಲದಕ್ಕಿಂತ ಹೆಚ್ಚಾಗಿ ಬೆಂಗಳೂರು ತಂಡದ ಬೌಲರ್ ಗಳ ದಾಳಿ ಮುಂಬೈ ತಂಡವನ್ನು ಕಟ್ಟಿ ಹಾಕಿತು. ಜೊತೆಗೆ ಆರ್ಸಿಬಿಯ ಮಿಂಚಿನ ವೇಗದ ಫೀಲ್ಡಿಂಗ್ ಗೆ ಮುಂಬೈ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿ ಸೋಲೊಪ್ಪಿಕೊಂಡಿತು.
25 ರನ್ ಗಳಿಗೆ ಎರಡು ವಿಕೆಟ್ ಕಬಳಿಸಿದ ಆರ್ಸಿಬಿ ತಂಡದ ಟಿಮ್ ಸೌಥಿ ಪಂದ್ಯ ಶ್ರೇಷ್ಠರೆನಿಸಿದರು.