
ಹೈದರಾಬಾದ್, ಮೇ 13: ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಅಂಪೈರ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಕೈರೊನ್ ಪೊಲಾರ್ಡ್ ಇದೀಗ ದಂಡ ತೆರುವಂತಾಗಿದೆ.
ಐಪಿಎಲ್ ನೀತಿ ನಿಯಮ 2.8ರ ಪ್ರಕಾರ ಪ್ರಥಮ ಹಂತದ (ಲೆವೆಲ್ 1) ಪ್ರಮಾದ ಎಸೆಗಿರುವುದನ್ನು ವೆಸ್ಟ್ ಇಂಡೀಸ್ನ ದೈತ್ಯ ಆಲ್ರೌಂಡರ್ ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಪಂದ್ಯದ ಸಂಭಾವನೆಯಲ್ಲಿನ ಶೇ. 25ರಷ್ಟು ಮೊತ್ತವನ್ನು ದಂಡವಾಗಿ ತೆರುವಂತೆ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ವಿಧಿಸಿದ್ದಾರೆ.
ಭಾನುವಾರ ನಡೆದ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನಿಂಗ್ಸ್ ಅಂತ್ಯದಲ್ಲಿ ಕೈರೊನ್ ಪೊಲಾರ್ಡ್ 25 ಎಸೆತಗಳಲ್ಲಿ 41 ರನ್ಗಳನ್ನು ಸಿಡಿಸಿ ಆಸರೆಯಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯ ಓವರ್ ಎಸೆದ ಡ್ವೇನ್ ಬ್ರಾವೋ 3ನೇ ಎಸೆತದಲ್ಲಿ ವೈಡ್ ಗೆರೆಗಿಂತಲೂ ಆಚೆಗೆ ಚೆಂಡನ್ನು ಎಸೆದಿದ್ದರು. ಆದರೆ, ಸ್ಟ್ರೈಕ್ ಅಂಪೈರ್ ನಿತಿನ್ ಮೆನನ್ ವೈಡ್ ನಿರ್ಧಾರ ನೀಡದೇ ಹೋದರು.
ಇದಕ್ಕೆ ಕ್ರೀಸ್ನಲ್ಲೇ ಬೇಸರ ವ್ಯಕ್ತ ಪಡಿಸಿದ ಪೊಲಾರ್ಡ್, ಮುರು ಎಸೆತವನ್ನು ಎದುರಿಸುವಾಗ ವೈಡ್ ಗೆರೆಯಿಂದ ಆಚೆಗೆ ಬ್ಯಾಟಿಂಗ್ ಮಾಡಲು ನಿಂತು ಅಂಪೈರ್ ನಿರ್ಧಾರವನ್ನು ಅಣಕಿಸುವಂತೆ ನಟಿಸಿ ಬಳಿಕ ಚೆಂಡನ್ನು ಎದುರಿಸದೆ ಹಿಂದೆ ಸರಿದರು. ಬಳಿಕ ಸ್ಟ್ರೈಕ್ ಮತ್ತು ಲೆಗ್ ಅಂಪೈರ್(ಇಯಾನ್ ಗೌಲ್ಡ್)ಗಳಿಬ್ಬರೂ ಪೊಲಾರ್ಡ್ ಬಳಿ ಕೆಲ ಕಾಲ ಚರ್ಚಿಸಿ ಅವರ ನಡವಳಿಕ ಕ್ರೀಡಾ ಸ್ಪೂರ್ತಿಗೆ ವಿರುದ್ಧವಾದದ್ದು ಎಂಬುದನ್ನು ಮನವರಿಕೆ ಮಾಡಿಕೊಟ್ಟು ಆಟ ಮುಂದುವರಿಯುವಂತೆ ಮಾಡಿದರು.
ಇದಕ್ಕೆ ಉತ್ತಮ ರೀತಿಯಲ್ಲೇ ಸ್ಪಂದಿಸಿದ ಪೊಲಾರ್ಡ್ ತಮ್ಮ ಹತಾಶೆ ಎಷ್ಟೇ ಇದ್ದರೂ ಅಂಪೈರ್ಗಳ ಬಳಿ ವಾಗ್ವಾದಕ್ಕೆ ಇಳಿಯದೆ ಅವರು ಹೇಳಿದ್ದನ್ನು ಶಿರಸಾ ಕೇಳುವ ಮೂಲಕ ತಮ್ಮ ಆಟವನ್ನು ಮುಂದುವರಿಸಿದರು. ಅಷ್ಟೇ ಅಲ್ಲದೆ ಬ್ರಾವೋ ಎಸೆದ ಕಡೆಯ ಎರಡು ಎಸೆತಗಳನ್ನು ಫೋರ್ಗೆ ಅಟ್ಟುವ ಮೂಲಕ ಮುಗುಳ್ನಗೆ ಬೀರಿದರು.
ಇದರೊಂದಿಗೆ ಮುಂಬೈ ತಂಡ ತನ್ನ 20 ಓವರ್ಗಳಲ್ಲಿ 8 ವಿಕೆಟ್ಗೆ 149 ರನ್ಗಳನ್ನು ದಾಖಲಿಸಿತು. ಅಂತಿಮವಾಗಿ ಚೆನ್ನೈ ತಂಡವನ್ನು 148 ರನ್ಗಳಿಗೆ ಕಟ್ಟಿಹಾಕಿ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದು ಅತ್ಯಂತ ಯಶಸ್ವಿ ತಂಡವೆನಿಸಿಕೊಂಡಿತು.
ಒಟ್ಟಾರೆ ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯ ಹಲವು ನಾಟಕೀಯ ತಿರುವುಗಳನ್ನು ಕಂಡರೂ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಹಣಾಹಣಿಯ ಸವಿಯನ್ನು ಉಣಬಡಿಸಿತು.