
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿಯಲ್ಲಿ ಪ್ಲೇ ಆಫ್ ತಲುಪಲು ಹೆಣಗಾಡುತ್ತಿರುವ ನಾಲ್ಕು ಬಾರಿ ಚಾಂಪಿಯನ್ ತಂಡ ಚೆನ್ನೈಸೂಪರ್ ಕಿಂಗ್ಸ್ ಆಘಾತದ ಮೇಲೆ ಆಘಾತ ಅನುಭವಿಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇನ್ನೇನು ಪಂದ್ಯ ಗೆಲ್ಲುವ ಉತ್ಸಾಹದಲ್ಲಿದ್ದ ಧೋನಿ ಬಳಗ ಕೊನೆ ಓವರ್ ನಲ್ಲಿ ಸೋತಿದೆ. ಅನುಭವಿ ಆಲ್ ರೌಂಡರ್ ಡಿಜೆ ಬ್ರಾವೋ ಕೊನೆ ಓವರ್ ಏಕೆ ಬೌಲ್ ಮಾಡಲಿಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಈಗಾಗಲೇ ತಿಳಿದಿದೆ.
ಟೂರ್ನಮೆಂಟ್ ಆರಂಭದಿಂದಲೇ ಗಾಯದ ಸಮಸ್ಯೆಯಿಂದ ಪಂದ್ಯದಿಂದ ದೂರ ಉಳಿದಿದ್ದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಅವರು ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ಇನ್ನಷ್ಟು ಪಂದ್ಯ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇತ್ತೀಚೆಗೆ ಕೆರಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ನಾಯು ಸೆಳೆತಕ್ಕೀಡಾಗಿ ನೋವು ಅನುಭವಿಸುತ್ತಿರುವ ಬ್ರಾವೋ ಇನ್ನೂ ಗುಣಮುಖರಾಗಿಲ್ಲ. ಸಿಪಿಎಲ್ ಫೈನಲ್ ನಲ್ಲಿ ಬೌಲಿಂಗ್ ಕೂಡಾ ಮಾಡಲು ಆಗಿರಲಿಲ್ಲ.
''ಬ್ರಾವೋ ಗಾಯಗೊಂಡು ನಮ್ಮ ದುರಾದೃಷ್ಟ, ಹೀಗಾಗಿ ಕೊನೆ ಓವರ್ ಬೌಲ್ ಮಾಡಲಾಗಲಿಲ್ಲ. ಜಡೇಜ ಕೊನೆ ಓವರ್ ಬೌಲ್ ಮಾಡಲು ಸಿದ್ಧರಿರಲಿಲ್ಲ. ಆದರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಸವಾಲು ಎದುರಿಸಬೇಕಾಯಿತು'' ಎಂದು ಫ್ಲೆಮಿಂಗ್ ಹೇಳಿದರು.
ಬ್ರಾವೋ ಅವರ ಬಲ ತೊಡೆ ಸ್ನಾಯುಗಳ ಸೆಳೆತದಿಂದ ಬಳಲುತ್ತಿದ್ದಾರೆ. ಕೊನೆ ಓವರ್ ಬೌಲ್ ಮಾಡಲಾಗಲಿಲ್ಲ ಎಂಬ ಬೇಸರ ಅವರಲ್ಲೂ ಇದೆ. ಕೊನೆ ಓವರ್ ಸ್ಪೆಷಲಿಸ್ಟ್ ಆಗಿ ತಂಡದಲ್ಲಿ ಅವರನ್ನು ಬಳಸಲಾಗುತ್ತಿದೆ. ಆದರೆ ಈಗ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲು ಫಿಟ್ನೆಸ್ ಉಳಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಅವರ ಮುಂದಿದೆ. ಅವರ ಗಾಯದ ಬಗ್ಗೆ ವೈದ್ಯರು ನೀಡುವ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.ಅವರಿಗೆ ಕೆಲ ದಿನಗಳು ಅಥವಾ ವಾರದ ಮಟ್ಟಿಗೆ ವಿಶ್ರಾಂತಿ ಪಡೆಯಲು ಸೂಚಿಸುವ ಸಾಧ್ಯತೆಯಿದೆ ಎಂದರು
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ