
ಈ ಬಾರಿಯ ಐಪಿಎಲ್ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡ ನಿರೀಕ್ಷಿತ ಫಲಿತಾಂಶವನ್ನು ನೀಡುವಲ್ಲಿ ವಿಫಲವಾಗಿದೆ. ಈ ಮಧ್ಯೆ ತಂಡದ ನಾಯಕನಾಗಿದ್ದ ದಿನೇಶ್ ಕಾರ್ತಿಕ್ ಜಮ್ಮ ಜಬಾಬ್ಧಾರಿಯಿಂದ ಹಿಂದೆ ಸರಿದು ನಾಯಕತ್ವವನ್ನು ಮಾರ್ಗನ್ಗೆ ಒಪ್ಪಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಅನೇಕ ಮಾಜಿ ಕ್ರಿಕೆಟಿಗರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಸಾಲಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ನ ದಿಗ್ಗಜ ಆಟಗಾರ ಬ್ರ್ಯಾನ್ ಲಾರಾ ಕೂಡ ಸೇರಿಕೊಂಡಿದ್ದಾರೆ. ಕೊಲ್ಕತಾ ತಂಡಕ್ಕೆ ನಾಯಕತ್ವದ ಸಮಸ್ಯೆಯೇ ಇರಲಿಲ್ಲ ಎಂದು ಲಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುನಿಲ್ ನರೈನ್ಗೆ ತಂಡದಲ್ಲಿ ಅವಕಾಶವನ್ನು ನೀಡಬೇಕಾದ ಅನಿವಾರ್ಯತೆಯಿದೆ ಎಂದು ಲಾರಾ ಹೇಳಿದ್ದಾರೆ. ನರೈನ್ ಬೌಲಿಂಗ್ ಶೈಲಿ ಶಂಕಾಸ್ಪದವಾಗಿದೆ ಎಚ್ಚರಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಅವರು ಕಳೆದ ಎರಡು ಪಂದ್ಯಗಳಿಂದ ತಂಡದಿಂದ ಹೊರಗುಳಿಸಿದ್ದರು.
"ಕೆಕೆಆರ್ ತಂಡಕ್ಕೆ ನಾಯಕತ್ವ ಸಮಸ್ಯೆಯೇ ಆಗಿರಲಿಲ್ಲ. ತಮ್ಮ ಅದ್ಭುತ ಬೌಲಿಂಗ್ ಕೈಚಳಕದಿಂದ ನರೈನ್ ತಂಡವನ್ನು ಎರಡು ಪಂದ್ಯಗಳಲ್ಲಿ ಗೆಲ್ಲಲು ಕಾರಣರಾಗಿದ್ದರು. ಬೌಲಿಂಗ್ ಶೈಲಿಯಲ್ಲಿನ ಸಮಸ್ಯೆಯನ್ನು ಶೀಘ್ರವಾಗಿ ಬದಲಾಯಿಸಿಕೊಂಡು ತಂಡವನ್ನು ಅವರು ಕೂಡಿಕೊಳ್ಳಬೇಕು" ಎಂದು ಲಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ನ ದಿಗ್ಗಜ ಆಂಡ್ರೆ ರಸ್ಸೆಲ್ ಆಡದ ಬಗ್ಗೆಯೂ ಪ್ರತಿಕ್ರಿಯಿಸಿದರು. "ಆಂಡ್ರೆ ರಸ್ಸೆಲ್ ರನ್ ಗಳಿಸಬೇಕಾದ ಅನಿವಾರ್ಯತೆಯಿದೆ. ತಂಡವನ್ನು ಮುನ್ನಡೆಸುವುದು ಯಾರಾದರೂ ಮಾಡಬಹುದು. ಆದರೆ ನಾಯಕನನ್ನು ಈ ಹಂತದಲ್ಲಿ ಬದಲಾಯಿಸಿ ತಮ್ಮ ಮೇಲೆ ಅವರೇ(ಕೆಕೆಆರ್) ಒತ್ತಡವನ್ನು ಹೇರಿಕೊಂಡಿದ್ದಾರೆ. ಈಗ ಎಲ್ಲರ ಚಿತ್ತವೂ ಅದರತ್ತ ನೆಟ್ಟಿದೆ" ಎಂದು ಲಾರಾ ಹೇಳಿದ್ದಾರೆ.
ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೆಕೆಆರ್ ತಂಡದ ನಾಯಕತ್ವ ಬದಲಾಗಿತ್ತು. ನಾಯಕ ದಿನೇಶ್ ಕಾರ್ತಿಕ್ ತಮ್ಮ ನಾಯಕತ್ವದಿಂದ ಕೆಳಗಿಳಿದು ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ನೀಡಲು ಬಯಸುವುದಾಗಿ ತಿಳಿಸಿದ್ದರು. ಆದರೆ ನಾಯಕತ್ವ ಬದಲಾವಣೆ ಕೆಕೆಆರ್ ಫಲಿತಾಂಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.