
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಐಪಿಎಲ್ನಲ್ಲಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ. ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಕಂಡಿದೆ. ಈ ಮಧ್ಯೆ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಅನಾರೋಗ್ಯಕ್ಕೆ ಈಡಾಗಿರುವುದು ತಂಡದ ಚಿಂತೆ ಹೆಚ್ಚಿಸಿದೆ.
ಕ್ರಿಸ್ ಗೇಲ್ ಅವರನ್ನು ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಸಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಚಿಂತಿಸಿತ್ತು. ಆದರೆ ಸನ್ರೈಸರ್ಸ್ ಹೈದರಾಬಾದ್ ಪಂದ್ಯಕ್ಕೂ ಮುನ್ನ ಗೇಲ್ ಹೊಟ್ಟನೋವಿನಿಂದ ಬಳಲಿದ ಕಾರಣ ಆಡುವ ಬಳಗದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಗೇಲ್ ಇನ್ನೂ ಕೂಡ ಚೇತರಿಸಿಕೊಳ್ಳದಿರುವುದು ತಂಡಕ್ಕೆ ಸಂಕಷ್ಟವನ್ನು ತಂದೊಡ್ಡಿದೆ.
ಭಾನುವಾರ ಕ್ರಿಸ್ ಗೇಲ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಆರೊಗ್ಯದಲ್ಲಿ ಚೇತರಿಕೆಯನ್ನು ಕಾಣುತ್ತಿರುವ ಬಗ್ಗೆ ಗೇಲ್ ಸುಳಿವನ್ನು ನೀಡಿದ್ದಾರೆ. ಆಸ್ಪತ್ರೆಯ ಬೆಡ್ನಲ್ಲಿ ಮಲಗಿಕೊಂಡ ಸ್ಥಿತೊಯಲ್ಲೇ ತಮ್ಮ "ಬಿಂದಾಸ್ ಆಟಿಟ್ಯೂಡ್"ನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಫೋಟೋ ಜೊತೆಗೆ ಕ್ರಿಸ್ ಗೇಲ್ "ಇಷ್ಟು ವಿಚಾರವನ್ನು ಮಾತ್ರ ನಾನು ಹೇಳಲು ಬಯಸುತ್ತೇನೆ. ಹೋರಾದ ಹೊರತು ನಾನು ಎಂದೂ ಹಿಂದಕ್ಕೆ ಸರಿದವನಲ್ಲ. ನಾನು ಯೂನಿವರ್ಸ್ ಬಾಸ್.. ಇದು ಎಂದಿಗೂ ಬದಲಾಗುವುದಿಲ್ಲ. ನೀವು ನನ್ನಿಂದ ವಿಚಾರಗಳನ್ನು ಕಲಿಯಬಹುದು ಆದರೆ ನಾನು ಮಾಡುವ ಎಲ್ಲವನ್ನೂ ನೀವು ಅನುಸರಿಸಲು ಸಾದ್ಯವಿಲ್ಲ. ನನ್ನ ಶೈಲಿ ಹಾಗೂ ಅಬ್ಬರವನ್ನು ಮರೆಯಬೇಡಿ" ಎಂದು ಅಭಿಮಾನಿಗಳ ಹಾರೈಕೆಗೆ ಧನ್ಯವಾದಗಳನ್ನು ಗೇಲ್ ತಿಳಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭಿಕ ಪಂದ್ಯಗಳಲ್ಲಿ ಕ್ರಿಸ್ ಗೇಲ್ ಅವರನ್ನು ಹೊರಗಿಟ್ಟಿತ್ತು. ಆದರೆ ಮದ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ವಿಫಲರಾದ ನಂತರ ಗೇಲ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಿತ್ತು. ಆದರೆ ಆ ಸಂದರ್ಭದಲ್ಲಿ ಗೇಲ್ ಅನಾರೋಗ್ಯಕ್ಕೆ ಈಡಾಗಿರುವುದನ್ನು ಪಂಜಾಬ್ ತಂಡದ ಕೊಚ್ ಅನಿಲ್ ಕುಂಬ್ಳೆ ತಿಳಿಸಿದ್ದರು.