
ಕಳೆದ 13 ವರ್ಷಗಳಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಮೂರು ಬಾರಿ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಪ್ರತಿಯೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಜಿ ಆಟಗಾರ, ಕಾಮೆಂಟೆಟರ್ ಆಕಾಶ್ ಛೋಪ್ರಾ ಅವರು ಚೆನ್ನೈ ಆಟದ ಬಗ್ಗೆ ವಿಮರ್ಶೆ ಮಾಡಿದ್ದಾರೆ.
ಎಂಎಸ್ ಧೋನಿ ಅವರ ತಂಡ ಇನ್ಮುಂದೆ ಪ್ಲೇ ಆಫ್ ಹಂತಕ್ಕೇರಬೇಕಾದರೆ ಅದು ಎವೆರೆಸ್ಟ್ ಪರ್ವತ ಏರಿದಂಥ ಅನುಭವವಾಗಲಿದೆ. ಅಷ್ಟು ಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಂಡ ಬಳಿಕ ಸ್ವಯಂ ವಿಮರ್ಶೆ ಮಾಡಿಕೊಳ್ಳುವಷ್ಟು ಸಮಯವಿಲ್ಲ. ಇನ್ಮುಂದೆ ಏನೆ ಮಾಡಿದರೂ ಅದು ಅದ್ಭುತವಾಗಿರಬೇಕು. ಈ ಟೂರ್ನಮೆಂಟ್ ನಲ್ಲಿ ಯಾವುದೇ ಉತ್ತಮ ಭವಿಷ್ಯ ಕಾಣಿಸುತ್ತಿಲ್ಲ ಎಂದಿದ್ದಾರೆ.
ಏಳು ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋಲು ಕಂಡಿರುವ ಮಹೀ ಅವರ ಚೆನ್ನೈ ತಂಡ ಕನಿಷ್ಠ 5 ಪಂದ್ಯಗಳನ್ನಾದರೂ ಗೆಲ್ಲಬೇಕು, 6 ಗೆದ್ದರೆ ಪ್ಲೇ ಆಫ್ ಹೋಗುವುದು ಖಚಿತವಾಗಬಹುದು.
ಹೀಗಾಗಿ, ಇದು ವಿಶ್ವದ ಎತ್ತರದ ಪರ್ವತ ಎವೆರೆಸ್ಟ್ ಏರಬೇಕಾದ ಪರಿಸ್ಥಿತಿಯಂತಾಗಿದೆ. ಆದರೆ ಈಗ ಉಳಿದಿರುವ 7 ಪಂದ್ಯಗಳಲ್ಲಿ 5 ಪಂದ್ಯ ಗೆಲ್ಲುತ್ತಾರೆ ಎಂಬ ನಂಬಿಕೆಯೂ ಇಲ್ಲದ್ದಂತಾಗಿದೆ.
ಚೆನ್ನೈ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಬ್ಯಾಟ್ಸ್ ಮನ್ ಗಳು ಜವಾಬ್ದಾರಿ ಮರೆತ್ತಿದ್ದು, ಗೆಲ್ಲುವ ಮನಸ್ಥಿತಿ ಬೆಳೆಸಿಕೊಂಡಿಲ್ಲ, ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ನಲ್ಲಿ ಸಾಧ್ಯವಾಗುವಂಥ ಗುರಿಯನ್ನು ಅಸಾಧ್ಯವಾಗಿಸಿಕೊಂಡಿದ್ದು, ಬ್ಯಾಟ್ಸ್ ಮನ್ ಗಳ ಆಲಸ್ಯದಿಂದ ಮಾತ್ರ ಎಂದಿದ್ದಾರೆ. ಆದರೆ, ಇದೇ ಚೆನ್ನೈ ತಂಡ 2010ರಲ್ಲಿ ಇಂಥದ್ದೇ ಪರಿಸ್ಥಿತಿಯಲ್ಲಿತ್ತು, 5 ಪಂದ್ಯ ಸೋತಿದ್ದರೂ ನಂತರ ಸತತ ಗೆಲುವು ಸಾಧಿಸಿ ಕಪ್ ಎತ್ತಿತ್ತು. ಆದರೆ, 2020ರ ತಂಡದ ಬಗ್ಗೆ ಈ ನಂಬಿಕೆ ಹುಟ್ಟುತ್ತಿಲ್ಲ ಎಂದು ಹೇಳಿದರು.