
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆದ್ದಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ನ ಪ್ಲೇ ಆಫ್ ಕನಸು ಮುರಿದು ಬಿದ್ದಿತ್ತು. ಐದನೇ ಸ್ಥಾನದಲ್ಲಿ ಪಂದ್ಯಾಟ ಮುಗಿಸಿದ ಕೆಕೆಆರ್ ನಿರ್ಗಮಿಸಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ನಾಯಕನನ್ನು ಬದಲಿಸಿಕೊಂಡಿತ್ತು. ದಿನೇಶ್ ಕಾರ್ತಿಕ್ಗೆ ನೀಡಲಾಗಿದ್ದ ನಾಯಕತ್ವ ಇಂಗ್ಲೆಂಡ್ ಬ್ಯಾಟ್ಸ್ಮನ್ ಇಯಾನ್ ಮಾರ್ಗನ್ ಕೈಗೆ ದೊರೆತಿತ್ತು. ಆದರೂ ಕೋಲ್ಕತ್ತಾ ಪ್ಲೇ ಆಫ್ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
14 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದ ಕೋಲ್ಕತ್ತಾ, ನಿರಾಸೆ ಅನುಭವಿಸಿದೆ. ನಾಯಕತ್ವ ವಹಿಸಿದ್ದ ಇಯಾನ್ ಮಾರ್ಗನ್ ಆಗಲಿ, ದಿನೇಶ್ ಕಾರ್ತಿಕ್ ಆಗಲಿ ಗಮನಾರ್ಹ ಅನ್ನಿಸುವಂತ ಪ್ರದರ್ಶನ ಬಂದಿರಲಿಲ್ಲ. ಗಾಯದ ಕಾರಣ ಸ್ಫೋಟಕ ಬ್ಯಾಟ್ಸ್ಮನ್ ಆ್ಯಂಡ್ರೆ ರಸೆಲ್ ಕೂಡ ಟೂರ್ನಿಯಿಂದ ಹೊರ ಬಿದ್ದಿದ್ದರು. ಕೆಕೆಆರ್ ಸೋಲಿಗೆ ಇವೆಲ್ಲ ಕಾರಣವಾಗಿದ್ದವು.
ಐಪಿಎಲ್ನಿಂದ ಕೆಕೆಆರ್ ನಿರ್ಗಮಿಸಿದ ಬಳಿಕ ಇಯಾನ್ ಮಾರ್ಗನ್ ಸ್ಫೂರ್ತಿಯ ಸಂದೇಶ ಬರೆದಿದ್ದಾರೆ. 'ಈ ಸೀಸನ್ನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಮ್ಮನ್ನು ವಿಮರ್ಶಿಸಿಕೊಳ್ಳಲು, ಸೋಲಿನಿಂದ ಕಲಿಯಲು, ಬಲಿಷ್ಠರಾಗಿ ಮತ್ತೆ ಬರಲು ಇದು ಸಮಯ' ಎಂದು ಮಾರ್ಗನ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.