
ದುಬೈ: ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ರೋಚಕ ಗೆಲುವು ದಾಖಲಿಸುವುದರೊಂದಿಗೆ ಕ್ವಾಲಿಫೈಯರ್ 2ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಹೈದರಾಬಾದ್ ಗೆಲುವಿಗೆ ಆವತ್ತು ಪ್ರಮುಖ ಕಾರಣವೆಂದರೆ ಆಲ್ ರೌಂಡರ್ ಜೇಸನ್ ಹೋಲ್ಡರ್ ಮತ್ತು ಕೇನ್ ವಿಲಿಯಮ್ಸನ್.
ಟೂರ್ನಿಯ ಆರಂಭಿಕ ಬಹಳಷ್ಟು ಪಂದ್ಯಗಳಲ್ಲಿ ಹೋಲ್ಡರ್ ಆಡಿರಲಿಲ್ಲ. ಫಿಟ್ ಇಲ್ಲದ ಕಾರಣಕ್ಕೆ ಹೋಲ್ಡರ್ ಅವರನ್ನು ಮೈದಾನಕ್ಕಿಳಿಸಿರಲಿಲ್ಲ. ಆದರೆ ಆಡಿದ ಪಂದ್ಯಗಳಲ್ಲಿ ಹೋಲ್ಡರ್ ತಾನು ವಿಶ್ವಮಟ್ಟದ ಆಲ್ ರೌಂಡರ್ ಅನ್ನೋದನ್ನು ಸಾರಿ ಹೇಳಿದ್ದರು.
ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್, ಐಪಿಎಲ್ ಹರಾಜು ವೇಳೆಯ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ವಿಶ್ವದ ಬೆಸ್ಟ್ ಆಲ್ ರೌಂಡರ್ಗಳಲ್ಲಿ ಹೋಲ್ಡರ್ ಗುರುತಿಸಿಕೊಂಡಿದ್ದರೂ ಹರಾಜಿನ ವೇಳೆ ಹೋಲ್ಡರ್ ಅವರನ್ನು ಯಾರೂ ಖರೀದಿಸಿರಲಿಲ್ಲ. ಈ ಬಗ್ಗೆ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡಿದ ಗಂಭೀರ್, 'ಜೇಸನ್ ಹೋಲ್ಡರ್ ಅವರಂತ ಆಟಗಾರರನ್ನೂ ಯಾರೊಬ್ಬರೂ ಖರೀದಿಸಲು ಮುಂದಾಗದಿದ್ದಾಗ ನನಗೆ ಅಚ್ಚರಿಯಾಗಿತ್ತು. ಜಿಮ್ಮಿ ನೀಶಮ್, ಕ್ರಿಸ್ ಮೋರಿಸ್ ಅವರನ್ನು ಆರಿಸಿದರು. ಆದರೆ ಹೋಲ್ಡರ್ ಆಯ್ಕೆಯಾಗಿರಲಿಲ್ಲ. ಆದರೆ ಈಗ ಅದೇ ಹೋಲ್ಡರ್ ತಂಡಕ್ಕೆ ಬಲವಾಗಿದ್ದಾರೆ,' ಎಂದು ಗಂಭೀರ್ ಹೇಳಿದ್ದಾರೆ.