
ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕ್ರಿಸ್ ಗೇಲ್ ಟೂರ್ನಿಯಲ್ಲ ಮೊದಲ ಬಾರಿಗೆ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಈ ಪಂದ್ಯದಲ್ಲಿ ಭರ್ಜರಿ ಆಟವನ್ನು ಪ್ರದರ್ಶಿಸಿದ ಗೇಲ್ ಅರ್ಧ ಶತಕವನ್ನು ಪೂರೈಸಿದರು. ಈ ಪಂದ್ಯದಲ್ಲಿ ಗೇಲ್ ಸಿಕ್ಸರ್ ಬಾರಿಸಿದ ರೀತಿಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಶ್ವರ್ಯವನ್ನು ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು 45 ಎಸೆತಗಳಲ್ಲಿ 53 ರನ್ ಗಳಿಸಿದರು. ಇದರಲ್ಲಿ ಐದು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿತ್ತು. ಈ ಮೂಲಕ ಆರ್ಸಿಬಿ ನೀಡಿದ್ದ 172 ರನ್ಗಳ ಗುರಿಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಸಾಧಿಸಲು ಸಾಧ್ಯವಾಯಿತು.
ಈ ಪ್ರದರ್ಶನವನ್ನು ಕಂಡ ಬಳಿಕ ಯುವರಾಜ್ ಸಿಂಗ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕ್ರಿಸ್ ಗೇಲ್ ಅವರ ಉತ್ತಮ ಗೆಳೆಯನಾಗಿರುವ ಯುವಿ ಗೇಲ್ ಬ್ಯಾಟಿಂಗ್ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. "ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ಬ್ಯಾಟ್ನ ಮಧ್ಯಭಾಗಕ್ಕೆ ಚೆಂಡು ತಾಗಿದರೆ ಶಾರ್ಜಾದಿಂದ ಹಾರಿದ ಬಾಲ್ ಅಬುಧಾಬಿಯಲ್ಲಿ ಇಳಿಯಬಹುದು" ಎಂದು ಟ್ವೀಟ್ ಮಾಡಿದ್ದಾರೆ ಯುವರಾಜ್ ಸಿಂಗ್.
ಇನ್ನು ಇದೇ ಸಂದರ್ಭದಲ್ಲಿ ಯುವರಾಜ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 'ಇಬ್ಬರೂ ಉತ್ತಮ ಆರಂಭವನ್ನು ನೀಡಿದ್ದಾರೆ. ಅವರಿಬ್ಬರೇ ಗುರಿಯನ್ನು ತಲುಪಬಹುದು ಎಂದುಕೊಂಡಿದ್ದೆ.' ಎಂದು ಯುವಿ ಈ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಆರ್ಸಿಬಿ ತಂಡದ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಬಗ್ಗೆಯೂ ಯುವಿ ಇದೇ ಟ್ವೀಟ್ನಲ್ಲಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. 'ತುಂಬಾ ತಡವಾಗಿ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ಗೆ ಇಳಿಸಿದ್ದು ಅಚ್ಚರಯಾಯಿತು' ಎಂದಿದ್ದಾರೆ.