
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತ್ತು. ಅದರಲ್ಲೂ ಆರ್ಸಿಬಿ ತಂಡದ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಅದ್ಭುತ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಪ್ರಶಂಸೆಯನ್ನ ವ್ಯಕ್ತಪಡಿಸಿದ್ದು ಮಾತ್ರವಲ್ಲ ವಿಶೇಷ ಮನವಿಯೊಂದನ್ನೂ ಮಾಡಿದ್ದಾರೆ.
ಈ ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಮೂರನೇ ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಈ ಅದ್ಭುತ ಫಾರ್ಮ್ ಬಗ್ಗೆ ಮಾತನಾಡುತ್ತಾ ರವಿ ಶಾಸ್ತ್ರಿ ಅಂತಾರಾಷ್ಟ್ರಿಯ ಕ್ರಿಕೆಟ್ನ ನಿವೃತ್ತಿಯಿಂದ ಹೊರಬರಲು ಇದು ಸಂದರ್ಭ ಎಂದು ಮನವಿ ಮಾಡಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪ್ರದರ್ಶನವನ್ನು 'ಅವಾಸ್ತವ' ಎಂದು ರವಿಶಾಸ್ತ್ರಿ ಕೊಂಡಾಡಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವುದು ಕ್ರಿಕೆಟ್ನ ಉತ್ಕೃಷ್ಟತೆಯ ದೃಷ್ಠಿಯಿಂದ ಉತ್ತಮ ಎಂಬ ಅಭಿಪ್ರಾಯವನ್ನು ರವಿ ಶಾಸ್ತ್ರಿ ತಮ್ಮ ಟ್ವಿಟ್ನಲ್ಲಿ ಹೇಳಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದ ಎಬಿ ಡಿವಿಲಿಯರ್ಸ್, 2018ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿಯನ್ನು ಹೇಳಿದ್ದರು. ಕ್ರಿಕೆಟ್ನ ಉತ್ತುಂಗದ ಕಾಲದಲ್ಲಿ ಎಬಿಡಿ ತೆಗೆದುಕೊಂಡ ಈ ನಿರ್ಧಾರ ಅಭಿಮಾನಿಗಳಿಗೆ ಆಘಾತ ಮೂಡಿಸಿತ್ತು. ಬಳಿಕ ಲೀಗ್ ಕ್ರಿಕೆಟ್ನಲ್ಲಿ ಮಾತ್ರವೇ ಎಬಿ ಡಿವಿಲಿಯರ್ಸ್ ಸಕ್ರಿಯರಾಗಿದ್ದಾರೆ.
ಆದರೆ ಕಳೆದ ಒಂದು ವರ್ಷದಿಂದ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇದೆ. ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ವಿಶ್ವಕಪ್ಗೆ ಮರಳಲು ಎಬಿಡಿ ಕೂಡ ಸಿದ್ಧರಾಗುದ್ದರು. ಆದರೆ ಸದ್ಯ ಕೊರೊನಾ ವೈರಸ್ನಿಂದಾಗಿ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದೆ. ಆದರೆ ಎಬಿ ಡಿವಿಲಿಯರ್ಸ್ ಮರಳುವಿಕೆಯ ಬಗ್ಗೆ ಯಾವುದೇ ಸ್ಪಷ್ಟತೆಗಳು ದೊರೆತಿಲ್ಲ.