
ಗೆಲುವಿನ ನಾಗಾಲೋಟದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಂತಿಮ ಹಂತದಲ್ಲಿ ಎಡವುತ್ತಿರುವುದು ಸ್ಪಷ್ಟವಾಗುತ್ತಿದೆ. ಗೆಲುವಿನ ಮೇಲೆ ಗೆಲುವು ಸಾಧಿಸಿ ಮುನ್ನುಗ್ಗುತ್ತಿದ್ದ ಡೆಲ್ಲಿ ಹುಡುಗರು ಸತತ ಎರಡನೇ ಸೋಲು ಕಂಡಿದ್ದಾರೆ. ಪಂಜಾಬ್ ವಿರುದ್ದದ ಸೋಲಿನ ಬಳಿಕ ಕೆಕೆಆರ್ ವಿರುದ್ದವೂ ಹೀನಾಯವಾಗಿ ಶರಣಾಗಿದ್ದಾರೆ.
ಈ ಸೋಲಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಪ್ರತಿಕ್ರಿಯಿಸಿ ಸೋಲಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ಇಂದಿನ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ನಮಗಿಂತ ಪ್ರತಿಯಂದು ವಿಭಾಗದಲ್ಲೂ ಶ್ರೇಷ್ಠ ಪ್ರದರ್ಶನವನ್ನು ನೀಡಿತು ಎಂದು ಹೇಳಿಕೆ ನೀಡಿದ್ದಾರೆ.
"ಆರಂಭದಲ್ಲಿ ನಾವು ಉತ್ತಮ ಪ್ರದರ್ಶನವನ್ನು ನೀಡಿ ಕೆಲ ವಿಕೆಟ್ಗಳನ್ನು ಪಡೆದೆವು. ಈ ಮೂಲಕ ಅವರ ಮೇಲೆ ಒತ್ತಡವನ್ನು ಹೇರಿದೆವು. ಆದರೆ ಸುನಿಲ್ ನರೈನ್ ಕ್ರೀಸ್ಗೆ ಬಂದ ಬಳಿಕ ಅವರು ಬ್ಯಾಟಿಂಗ್ ಮುಂದುವರಿಸಿದ ರೀತಿ ಅದ್ಭುತವಾಗಿತ್ತು. ನಾವು ನಮ್ಮ ತಂತ್ರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು" ಎಂದು ಶ್ರೇಯಸ್ ಅಯ್ಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅವರು ನಮ್ಮ ಬೌಲರ್ಗಳ ಮೇಲೆ ಸುಲಭವಾಗಿ ಸವಾರಿ ಮಾಡಲು ಆರಂಭಿಸಿದರು. ತಮ್ಮ ಹೊಡೆತಗಳ ಆಯ್ಕೆಯಲ್ಲಿ ಅವರು ಉತ್ತಮವಾಗಿದ್ದರು. ಪ್ರತಿ ವಿಭಾಗದಲ್ಲೂ ನಮಗಿಂತ ಕೆಕೆಆರ್ ಮುಂದಿತ್ತು" ಎಂದು ಶ್ರೇಯಸ್ ಅಯ್ಯರ್ ಪಂದ್ಯ ಮುಕ್ತಾಯದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.