
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ತನ್ನ ಸುದೀರ್ಘ ಕಾಲದ ಅಘೋಷಿತ ನಿಯಮವೊಂದನ್ನು ಮುರಿದುಕೊಂಡಿದೆ. ಕೆಕೆಆರ್ ತಂಡ ಕಳೆದ ಐದು ವರ್ಷಗಳಲ್ಲಿ ಟಾಸ್ ಗೆದ್ದರೆ ಹಿಂದೆ ಮುಂದೆ ನೋಡದೆ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿತ್ತು. ಆದರೆ ಸುದೀರ್ಘ ಐದು ವರ್ಷಗಳ ನಂತರ ಈ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಂಡಿದೆ.
ಐಪಿಎಲ್ನಲ್ಲಿ ಕೊನೆಯ ಬಾರಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು 2015ರ ಮೇ ತಿಂಗಳಿನಲ್ಲಿ. ಪಂದ್ಯಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ ಬರೊಬ್ಬರಿ 69 ಪಂದ್ಯಗಳ ನಂತರ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಂಡಿದೆ.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡ ಫೀಲ್ಡಿಂಗನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಬ್ಯಾಟಿಂಗ್ ಆಯ್ಕೆ ನಿರ್ಧಾರವನ್ನು ಪ್ರಕಟಿಸಿದ ನಂತರ ಎದುರಾಳಿ ತಂಡದ ನಾಯಕ ಎಂಎಸ್ ಧೋನಿ ಮಾತನಾಡುತ್ತಾ ದಿನೇಶ್ ಕಾರ್ತಿಕ್ ನಿರ್ಧಾರದ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದ್ದರು. ತನ್ನ ನಿರ್ಧಾರ ಕೂಡ ಚೇಸಿಂಗ್ ಆಗಿತ್ತು ಎಂದು ಹೇಳಿದ್ದಾರೆ.
"ನಾವು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತೇವೆ. ಕಳೆದ ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿ ನಾವು ಉತ್ತಮ ಪ್ರದರ್ಶನವನ್ನು ನೀಡಿದ್ದೆವು. ಇಂದಿನ ಪಂದ್ಯದಲ್ಲಿ ಮತ್ತೆ ಆ ಪ್ರದರ್ಶನವನ್ನು ಪುನರಾವರ್ತಿಸಲಿದ್ದೇವೆ. ಕಳೆದ ಪಂದ್ಯದ ಆಡುವ ಬಳಗದ ಜೊತೆಗೆ ಕಣಕ್ಕಿಳಿಯಲಿದ್ದೇವೆ ಎಂದು ಟಾಸ್ ಬಳಿಕ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದರು.
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ತಂಡದ ಆಡುವ ಬಳಗದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳದಿದ್ದರೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಿದೆ. ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಸುನಿಲ್ ನರೈನ್ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ ಆರಂಭಿಕನಾಗಿ ರಾಹುಲ್ ತ್ರಿಪಾಠಿ ಕಣಕ್ಕಿಳಿದಿದ್ದಾರೆ.