
ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ. ಮುಂಬೈ ತಂಡದ ನಾಯಕ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಕಾರಣ ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಆರ್ಸಿಬಿ ವಿರುದ್ದದ ಪಂದ್ಯದಿಂದಲೂ ರೋಹಿತ್ ಬದಲಿಗೆ ಕಿರಾನ್ ಪೊಲಾರ್ಡ್ ಮುನ್ನಡೆಸುವುದು ಖಚಿತ.
ನಾಯಕನಾಗಿ ಪೊಲಾರ್ಡ್ ಉತ್ತಮ ದಾಖಲೆಯನ್ನು ಹೊಂದಿದ್ದರೂ ಆರ್ಸಿಬಿ ವಿರುದ್ಧದ ಒತ್ತಡದ ಪಂದ್ಯದಲ್ಲಿ ರೋಹಿತ್ ನಾಯಕತ್ವ ಮುಂಬೈಗೆ ಅಗತ್ಯವಿತ್ತು ಎಂದು ಪ್ರಗ್ಯಾನ್ ಓಝಾ ಅಭಿಪ್ರಾಯಪಟ್ಟಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ತಂಡ ರೋಹಿತ್ ಶರ್ಮಾ ನಾಯಕತ್ವವನ್ನು ಕಳೆದುಕೊಳ್ಳಲಿದೆ ಎಂದು ಓಝಾ ಹೇಳಿದ್ದಾರೆ.
ಸ್ಪೋರ್ಟ್ಸ್ ಟುಡೇ ಜೊತೆಗೆ ಮಾತನಾಡಿದ ಪ್ರಗ್ಯಾನ್ ಓಝಾ, "ಮುಂಬೈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದರೆ ಅದಕ್ಕೆ ಇನ್ನೂ ಹೆಚ್ಚಿನ ಬೆಲೆ ಇರುತ್ತಿತ್ತು. ನಾವು ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಬಗ್ಗೆ ಹೆಚ್ಚು ಮಾತಾಡುತ್ತೇವೆ ಏಕೆಂದರೆ, ಅವರು ಬದಲಾವಣೆ ಮಾಡುವ ರೀತಿ, ಕಠಿಣ ಸಂದರ್ಭದಲ್ಲಿ ಬೌಲರ್ಗಳನ್ನು ಬಳಸಿಕೊಳ್ಳುವ ಬಗೆ ತುಂಬಾ ಪ್ರಮುಖವಾಗಿರುತ್ತದೆ" ಎಂದು ಹೇಳಿಕೆ ನೀಡಿದ್ದಾರೆ.
"ಕಿರಾನ್ ಪೊಲಾರ್ಡ್ ಅತ್ಯುತ್ತಮ ನಾಯಕ ಎಂಬುದು ನಮಗೆಲ್ಲಾ ತಿಳಿದಿದೆ. ಹಾಗೂ ಅವರು ಸಾಕಷ್ಟು ಕ್ರಿಕೆಟ್ ಕೂಡ ಆಡಿದ್ದಾರೆ. ಆದರೆ ನೀವು ರೋಹಿತ್ ಶರ್ಮಾ, ಎಂಎಸ್ ಧೋನಿ, ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಹೋಲಿಸಿದರೆ ಇವರೆಲ್ಲಾ ವಿಶೇಷ ತಳಿಯ ನಾಯಕರಾಗಿದ್ದಾರೆ" ಎಂದು ಓಝಾ ಹೇಳಿದ್ದಾರೆ.
"ಕಿರಾನ್ ಪೊಲಾರ್ಡ್ ಒತ್ತಡವನ್ನು ನಿರ್ವಹಿಸಿದರೆ ನಿಜಕ್ಕೂ ಅದು ಮುಂಬೈಗೆ ಅದ್ಭುತ ಪಂದ್ಯವಾಗಿರಲಿದೆ. ಆದರೆ ನಾಯಕನಾಗಿ ವಿರಾಟ್ ಕೊಹ್ಲಿ ಅದ್ಭುತ ಸಂದರ್ಭವನ್ನು ಹೊಂದಿದ್ದಾರೆ. ರೊಹಿತ್ ಶರ್ಮಾ ಮುಂಬೈ ನಾಯಕತ್ವ ವಹಿಸಿಕೊಳ್ಳದಿದ್ದರೆ ಎರಡು ತಂಡಗಳು ಕೂಡ ಸಮಬಲವನ್ನು ಹೊಂದಿರಲಿದೆ" ಎಂದು ಓಝಾ ಹೇಳಿದ್ದಾರೆ.