
ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 7) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲಬೇಕಿದ್ದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಸೋತಿತ್ತು. ಪಂದ್ಯದ ಸೋಲಿಗೆ ಪ್ರಮುಖ ಕಾರಣ ಏನೆಂದು ಸಿಎಸ್ಕೆ ನಾಯಕ ಎಂಎಸ್ ಧೋನಿ ಹೇಳಿಕೊಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್, ನಿತೀಶ್ ರಾಣಾ ಅವರ 81 (51 ಎಸೆತ) ರನ್ ಕೊಡುಗೆಯೊಂದಿಗೆ 20 ಓವರ್ಗೆ ಎಲ್ಲಾ ವಿಕೆಟ್ ಕಳೆದು 167 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಸಿಎಸ್ಕೆ, ಶೇನ್ ವಾಟ್ಸನ್ 50, ಅಂಬಾಟಿ ರಾಯುಡು 30 ಗಮನಾರ್ಹ ರನ್ನೊಂದಿಗೆ 20 ಓವರ್ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಬಾರಿಸಿ ಕೇವಲ 10 ರನ್ನಿಂದ ಸೋತಿತು.
ಪಂದ್ಯದ ಸೋಲಿನ ಬಳಿಕ ಮಾತನಾಡಿದ, 'ಮಧ್ಯಮ ಓವರ್ಗಳಲ್ಲಿ ಕೆಕೆಆರ್ ಮಾಡಿದ 2-3 ಓವರ್ಗಳು ಒಳ್ಳೆಯ ಓವರ್ಗಳಾಗಿದ್ದವು. ಅಲ್ಲಿ ನಾವು 2-3 ವಿಕೆಟ್ಗಳನ್ನು ಕಳೆದುಕೊಳ್ಳದೆ ಒಳ್ಳೆಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರೆ ಪಂದ್ಯ ಗೆಲ್ಲುತ್ತಿದ್ದೆವು. ಮೊದಲ 5-6 ಓವರ್ಗಳಲ್ಲಿ ನಾವು ತುಂಬಾ ಎಚ್ಚರಿಕೆಯಿಂದಿರಬೇಕು,' ಎಂದಿದ್ದಾರೆ.
'ಸ್ಯಾಮ್ ಕರನ್ ಬೌಲಿಂಗ್ನಲ್ಲಿ ತುಂಬಾ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ನಲ್ಲಿ ಸಾಮಾನ್ಯವಾಗಿ ಒಳ್ಳೆಯ ಆಟವನ್ನೇ ನೀಡಿದ್ದೇವೆ. ಆದರೆ ಇವತ್ತು ಬ್ಯಾಟ್ಸ್ಮನ್ಗಳು ಬೌಲರ್ಗಳ ಶ್ರಮವನ್ನು ವ್ಯರ್ಥಗೊಳಿಸಿದ್ದಾರೆ,' ಎಂದು ವಿವರಿಸಿದರು. ಕೆಕೆಆರ್ ವಿರುದ್ಧದ ಸೋಲಿನೊಂದಿಗೆ ಸಿಎಸ್ಕೆ ಆಡಿರುವ 6 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು 4ರಲ್ಲಿ ಸೋತಂತಾಗಿದೆ.