
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಂಡಿರಜ್ಜು ಗಾಯಕ್ಕೊಳಗಾಗಿ ವಿಶ್ರಾಂತಿಯನ್ನು ಪಡೆದಿದ್ದರು. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲು ಕಾದು ನೋಡಲು ಮುಂದಾಗಿತ್ತು ಬಿಸಿಸಿಐ. ರೋಹಿತ್ ಶರ್ಮಾ ಲೀಗ್ ಹಂತದ ಕೊನೆಯ ಪಂದ್ಯ ಸನ್ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ತಾನು ಸಂಪೂರ್ವಾಗಿ ಗುಣಮುಖನಾಗಿದ್ದೇನೆ ಎಂದು ಶರ್ಮಾ ಸ್ಪಷ್ಟಪಡಿಸಿದ್ದರು.
ಆದರೆ ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರೋಹಿತ್ ಶರ್ಮಾಗೆ ಬಹುಮುಖ್ಯ ಸಲಹೆಯೊಂದನ್ನು ನೀಡಿದ್ದರು. ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಗಂಗೂಲಿ ರೋಹಿತ್ ಶರ್ಮಾ ಕಮ್ಬ್ಯಾಕ್ ಮಾಡಲು ಅವಸರ ಪಡುವುದು ಬೇಡ ಎಂದು ಹೇಳಿದ್ದರು. ಆದರೆ ರೊಹಿತ್ ಶರ್ಮಾ ಮಾತ್ರ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.
"ನೀವು ಆತ ಮತ್ತೊಮ್ಮೆ ಗಾಯಗೊಳ್ಳುವುದನ್ನು ನೋಡಲು ಬಯಸುವುದಿಲ್ಲ. ಆತನಿಗೆ ಮಂಡಿರಜ್ಜು ಗಾಯವಾಗಿರುವ ಕಾರಣ ಅದು ಮತ್ತೊಮ್ಮೆ ಸಂಭವಿಸುವ ಸಾಧ್ಯತೆಯಿದೆ. ಹಾಗಾದಲ್ಲಿ ಪುನರಾಗಮನ ಮಾಡಲು ಸುದೀರ್ಘ ಕಾಲ ತೆಗೆದುಕೊಳ್ಳಲಿದೆ" ಎಂದು ಗಂಗೂಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
"ರೋಹಿತ್ ಶರ್ಮಾ ಅವರಿಗಾಗಿ ಸಾಖಷ್ಟು ಜನರು ಶ್ರಮಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಫಿಸಿಯೋ ಕರ್ತವ್ಯದಲ್ಲಿದ್ದಾರೆ. ಜೊತೆಗೆ ಟೀಮ್ ಇಂಡಿಯಾ ಫಿಸಿಯೋ ನಿತಿನ್ ಪಟೇಲ್ ಕೂಡ ಇದ್ದಾರೆ. ಸ್ವತಃ ರೋಹಿತ್ ಶರ್ಮಾ ಅವರಿಗೂ ತನ್ನ ಸುದೀರ್ಘ ಕಾಲದ ಕ್ರಿಕೆಟ್ ಕೆರಿಯರ್ನ ಬಗ್ಗೆ ಅರಿವಿದೆ. ಯಾಕೆಂದರೆ ಇದು ಕೇವಲ ಒಂದು ಐಪಿಎಲ್ ಅಥವಾ ಮುಂಬರುವ ಸರಣಿ ಮಾತ್ರವೇ ಕಾರಣವಾಗಿಲ್ಲ. ಆತನಿಗಾಗಿ ಏನು ಮಾಡಬೇಕು ಎಂಬುದನ್ನು ತಿಳಿದು ಮುಂದುವರಿಯುವಷ್ಟು ರೋಹಿತ್ ಪ್ರೌಢಿಮೆಯನ್ನು ಹೊಂದಿದ್ದಾರೆ" ಎಂದು ಸೌರವ್ ಗಂಗೂಲಿ ಹೇಳಿದ್ದರು.
ಇದಕ್ಕೂ ಮುನ್ನ ಟೀಮ್ ಇಂಡಿಯಾದ ಫಿಸಿಯೋ ನಿತಿನ್ ಪಟೇಲ್ ಹಾಗೂ ಕೆಲ ತಜ್ಞರು ಪರೀಕ್ಷಿಸಿ ಮೂರು ವಾರಗಳ ವಿಶ್ರಾಂತಿಗಾಗಿ ಸಲಹೆಯನ್ನು ನೀಡಿದ್ದರು. ಇದರ ಪ್ರಕಾರ ರೋಹಿತ್ ಶರ್ಮಾ ನೆವೆಂಬರ್ 10ರಂದು ನಡೆಯವ ಫೈನಲ್ ಪಂದ್ಯಕ್ಕೂ ಮುನ್ನ ಲಭ್ಯರಾಗುವ ಸಾಧ್ಯತೆಯಿರಲಿಲ್ಲ. ಆದರೆ ಅದಕ್ಕೆ ಒಂದು ವಾರಕ್ಕೂ ಮುನ್ನವೇ ರೋಹಿತ್ ಶರ್ಮಾ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ