
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಜಯದ ಹಾದಿಗೆ ಮರಳಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಸತತ ಮೂರನೇ ಗೆಲುವನ್ನು ದಾಖಲಿಸಿಕೊಂಡಿರುವ ಮುಂಬೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ತಂಡದಲ್ಲಿ ಇನ್ನೂ ಕೆಲ ವಿಭಾಗಗಳಲ್ಲಿ ಸುಧಾರನೆಯಾಗಬೇಕು ಎಂಬ ಮಾತನ್ನು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಜಯವರ್ಧನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಈ ಬಾರಿಯ ಆವೃತ್ತಿಯ ಆರಂಭದಲ್ಲಿ ನೀರಸ ಪ್ರದರ್ಶನವನ್ನು ನೀಡಿತ್ತು. ಆದರೆ ಬಳಿಕ ಇಡೀ ತಮಡ ಒಗ್ಗಟ್ಟಿನ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗುತ್ತಿದ್ದು ಫಲಿತಾಂಶದಲ್ಲೂ ಇದು ವ್ಯಕ್ತವಾಗುತ್ತಿದೆ. ಹೀಗಾಗಿ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ.
ತಂಡದ ಈವರೆಗಿನ ಪ್ರದರ್ಶನದ ಬಗ್ಗೆ ಮುಂಬೈ ಇಂಡಿಯನ್ಸ್ ಕೋಚ್ ಜಯವರ್ಧನೆ ಸಂತಸವನ್ನು ವ್ಯಕ್ತಪಡಿಸಿದರು. ಜೊತೆಗೆ ಕೆಲ ವಿಭಾಗಗಳಲ್ಲಿ ಇನ್ನೂ ಸುಧಾರಣೆಯಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಯಾವ ವಿಭಾಗದಲ್ಲಿ ಸುಧಾರಣೆಯನ್ನು ಬಯಸುತ್ತಿದ್ದಾರೆ ಎಂಬ ಬಗ್ಗೆ ಜಯವರ್ಧನೆ ಸ್ಪಷ್ಟತೆಯನ್ನು ನೀಡಲು ಮುಂದಾಗಿಲ್ಲ.
ನಾವು ಕೆಲ ಯೋಜನೆಗಳನ್ನು ಹಾಕಿಕೊಂಡಿದ್ದೆವು. ಈ ಪಂದ್ಯಕ್ಕಾಗಿ ಬೇರೆಯದ್ದೇ ರಣತಂತ್ರವನ್ನು ಹೆಣೆಯಲಾಗಿತ್ತು. ಬೂಮ್ರಾ ಅವರನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡೆವು. ಬ್ಯಾಟಿಂಗ್ ಸಂದರ್ಭದಲ್ಲಿ ಪಿಚ್ನಲ್ಲಾಗುತ್ತಿದ್ದ ಬದಲಾವಣೆಯನ್ನು ಗಮನಿಸಿ ಬೌಲಿಂಗ್ ವೇಳೆ ಬದಲಾವಣೆಗಳನ್ನು ಮಾಡಿಕೊಂಡೆವು. ಇದು ಯಶಸ್ವಿಯಾಯಿತು ಎಂದು ಗೆಲುವಿನ ನಂತರ ಜಯವರ್ಧನೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಬೂಮ್ರಾ ಜೊತೆಗೆ ಟ್ರೆಂಟ್ ಬೋಲ್ಟ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಅದ್ಭುತ ಪ್ರದರ್ಶನವನ್ನು ನೀಡಿದರು. ಸ್ಪಿನ್ನರ್ಗಳ ಪ್ರದರ್ಶನದ ಬಗ್ಗೆಯೂ ಜಯವರ್ಧನೆ ಸಂತಸವನ್ನು ವ್ಯಕ್ತಪಡಿಸಿದರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಸೂರ್ಯಕುಮಾರ್ ಬಗ್ಗೆಯೂ ಜಯವರ್ಧನೆ ಪ್ರಶಂಸೆಯ ಮಾತುಗಳನ್ನಾಡಿದರು.