
ಐಪಿಎಲ್ ಕ್ರಿಕೆಟ್ನಲ್ಲಿ ಅದರಲ್ಲೂ ಚೆನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹಿಂದೆ ಎಂದೂ ಕಾಣದಂಥ ಪರಿಸ್ಥಿತಿ ಎದುರಾಗಿದೆ. ಐಪಿಎಲ್ 2020 ಮೊದಲ ವಾರದಲ್ಲೇ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ಅಭಿಮಾನಿಗಳಲ್ಲಿ ಹಲವಾರು ಮಂದಿ ಮತ್ತೊಮ್ಮೆ ರೈನಾ ಇದ್ದಿದ್ರೆ ಎಂದು ರಾಗ ಎಳೆಯಲು ಶುರು ಮಾಡಿದ್ದಾರೆ.
ಜಾರ್ಖಂಡ್ ಮೂಲದ ಮಹೇಂದ್ರ ಸಿಂಗ್ ಧೋನಿ ಮತ್ತು ಐಪಿಎಲ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರ ನಡುವಿನ ಸ್ನೇಹ, ಸಂಬಂಧ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಐಪಿಎಲ್ 2020ರಿಂದ ಸಡನ್ನಾಗಿ ರೈನಾ ಭಾರತಕ್ಕೆ ನಿರ್ಗಮಿಸಲು ಧೋನಿ ಜೊತೆಗಿನ ವಿರಸವೇ ಕಾರಣ ಎಂಬ ಸುದ್ದಿಯನ್ನು ಹಬ್ಬಿಸಲಾಗಿದೆ. ಮ್ಯಾನೇಜ್ಮೆಂಟ್ ಜೊತೆ ಕೂಡಾ ರೈನಾ ಸರಿಯಾಗಿಲ್ಲ ಹೀಗಾಗಿ, ಅವರ ಹೆಸರನ್ನು ಚೆನ್ನೈ ತಂಡದ ಅಧಿಕೃತ ವೆಬ್ ತಾಣದಿಂದಲೂ ತೆಗೆದು ಹಾಕಲಾಗಿದೆ ಎನ್ನಲಾಗಿದೆ.
ಮ್ಯಾನೇಜ್ಮೆಂಟ್ ಜೊತೆ ರೈನಾ ಹೇಗೂ ಏನೋ ಗೊತ್ತಿಲ್ಲ, ಆದರೆ ಧೋನಿ ಜೊತೆಗೆ ಮಾತ್ರ ತಾವು ಚೆನ್ನಾಗಿರುವುದಾಗಿ ರೈನಾ ಸೂಚ್ಯವಾಗಿ ತಿಳಿಸಿದ್ದಾರೆ. ಧೋನಿ-ರೈನಾ ಫ್ಯಾಬ್ ಕ್ಲಬ್ ಹಂಚಿಕೊಂಡಿದ್ದ ಹಳೆ ಚಿತ್ರವೊಂದರನ್ನು ರೈನಾ ಲೈಕ್ ಮಾಡಿ, ಶೇರ್ ಮಾಡಿದ್ದಾರೆ. ಈ ಮೂಲಕ ಧೋನಿ ಜೊತೆಗೆ ಇನ್ನೂ ಆಡಲು ಬಯಸಿರುವುದಾಗಿ ಹೇಳಿದ್ದಾರೆ.

ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ''ಚಿನ್ನ ತಲಾ'' ಶಾಶ್ವತವಾಗಿ ದೂರಾಗುತ್ತಿದ್ದಾರೆಯೇ? ಎಂಬ ಸಂಶಯ ಅಭಿಮಾನಿಗಳಲ್ಲಿ ಇನ್ನೂ ಇದೆ.
ಐಪಿಎಲ್ 2020 ಆಡಲು ಚೆನ್ನೈ ತಂಡದೊಡನೆ ಬಂದಿದ್ದ ಸುರೇಶ್ ರೈನಾ ಹೋಟೆಲ್ ತಲುಪಿದ ತನಕ ಎಲ್ಲವೂ ಚೆನ್ನಾಗಿತ್ತು. ಆದರೆ, ನಂತರ ಏನಾಯಿತು ಗೊತ್ತಿಲ್ಲ. ಸಡನ್ ಆಗಿ ಭಾರತಕ್ಕೆ ಮರಳಿದ ರೈನಾ ಕೊಟ್ಟಿದ್ದು, ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಕುಟುಂಬದೊಡನೆ ಇರಬೇಕು ಎಂದಿದ್ದರು. ಆದರೆ, ನಿಜವಾದ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಧೋನಿ ಜೊತೆಗೆ ಜಗಳವಾಡಿಕೊಂಡರು ಎಂಬ ಸುದ್ದಿಯನ್ನೂ ಹಬ್ಬಿಸಲಾಯಿತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಇದು ಸುಳ್ಳು ಸುದ್ದಿ ಎಂದು ತಳ್ಳಿ ಹಾಕಿತು. ರೈನಾ ಕೂಡಾ ಐಪಿಎಲ್ ಗೆ ಮರಳುವ ಸುಳಿವು ನೀಡಿದ್ದರು. ಆದರೆ, ಆಗಿದ್ದೇ ಬೇರೆ.