
ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಪರ್ಧೆ ಕೊನೆಗೊಂಡಿರುವುದರಿಂದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಆಟಗಾರರಿಗಾಗಿಯೇ ರಚಿಸಲಾಗಿರುವ ಪ್ರತ್ಯೇಕ ಬಯೋ ಬಬಲ್ಗೆ ಸ್ಥಳಾಂತರಗೊಂಡಿದ್ದಾರೆ.
ಶುಕ್ರವಾರ (ನವೆಂಬರ್ 7) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳ ಸೋಲನುಭವಿಸಿತು. ಹೀಗಾಗಿ ಕೊಹ್ಲಿ ಇನ್ನು ಐಪಿಎಲ್ ಬದಿಗಿಟ್ಟು ಆಸ್ಟ್ರೇಲಿಯಾ ಪ್ರವಾಸ ಸರಣಿಯತ್ತ ಚಿತ್ತ ನೆಡಬೇಕಾಗಿದೆ.
ಕೊರೊನಾ ವೈರಸ್ ಕಾರಣ, ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ಭಾರತೀಯ ಆಟಗಾರರು ತರಬೇತಿ ನಡೆಸಲು ಪ್ರತ್ಯೇಕ ಬಬಲ್ ಇದೆ. ಕೊಹ್ಲಿಯೀಗ ಈ ಬಬಲ್ ಓಳಗೆ ಪ್ರವೇಶಿಸಿದ್ದಾರೆ. ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭವಾಗಲಿದೆ. ಮೂರು ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಸರಣಿ ಒಳಗೊಂಡಿರಲಿದೆ.
'ಕಳೆದ ತಡರಾತ್ರಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾ ಬಬಲ್ಗೆ ಸ್ಥಳಾಂತರಗೊಂಡಿದ್ದಾರೆ. ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿ ಅವರು ಎರಡು ಅಥವಾ ಮೂರು ದಿನಗಳ ಬಳಿಕ ತಯಾರಿ ಆರಂಭಿಸುವ ನಿರೀಕ್ಷೆಯಿದೆ,' ಎಂದು ಮೂಲವೊಂದು ತಿಳಿಸಿದೆ.