
ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡ ಬಳಿಕ ಸೂಪರ್ ಓವರ್ನಲ್ಲಿ ಪಂದ್ಯದ ಫಲಿತಾಂಶವನ್ನು ಕಂಡುಕೊಳ್ಳಲಾಯಿತು. ಮುಂಬೈ ಇಂಡಿಯನ್ಸ್ ನೀಡಿದ ಗುರಿಯನ್ನು ಆರ್ಸಿಬಿ ಮೀರಿನಿಂತು ಪಂದ್ಯವನ್ನು ಈ ಮೂಲಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಇಶಾನ್ ಕಿಶನ್ ಸೂಪರ್ ಓವರ್ನಲ್ಲಿ ಯಾಕೆ ಬ್ಯಾಟಿಂಗ್ಗೆ ಇಳಿಯಲಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡತೊಡಗಿತ್ತು. ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಕೂಡ ಈ ಬಗ್ಗೆ ಪ್ರಶ್ನಿಸಿದ್ದರು.
ಆದರೆ ಈ ಪ್ರಶ್ನೆಗೆ ಮುಂಬೈ ನಾಯಕ ರೋಹಿತ್ ಶರ್ಮಾ ಉತ್ತರವನ್ನು ನೀಡಿದ್ದಾರೆ. ಇಶಾನ್ ಕಿಶನ್ ಅವರನ್ನು ಕಣಕ್ಕೆ ಇಳಿಸದಿರಲು ಸೂಕ್ತ ಕಾರಣ ಇತ್ತು ಎಂಬ ಸಂಗತಿಯನ್ನು ಅವರು ಪಂದ್ಯದ ಬಳಿಕ ಹೇಳಿಕೆಯನ್ನು ನೀಡಿದ್ದಾರೆ. ಅದೇ ಕಾರಣದಿಂದಾಗಿ ಸೂಪರ್ ಓವರ್ನಲ್ಲಿ ಕಿರಾನ್ ಪೊಲಾರ್ಡ್ ಜೊತೆಗೆ ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರು ಎಂಬ ವಿಚಾರವನ್ನು ತಿಳಿಸಿದ್ದಾರೆ.
"ಇಶಾನ್ ಕಿಶನ್ ಅವರನ್ನು ನಾವು ಬ್ಯಾಟಿಂಗ್ಗೆ ಕಳುಹಿಸಬಹುದಾಗಿತ್ತು. ಆದರೆ ಆತ ಸಾಕಷ್ಟು ಬಳಲಿದ್ದರು. ಅಷ್ಟೊಂದು ಅರಾಮದಾಯಕವಾಗಿರಲಿಲ್ಲ. ಆತನಲ್ಲಿ ಫ್ರೆಶ್ ಫೀಲಿಂಗ್ ಇಲ್ಲವಾದ ಕಾರಣ ನಿರ್ಧಾರ ಬದಲಾಯಿಸಿದೆವು" ಎಂದು ರೋಹಿತ್ ಶರ್ಮಾ ಇಶಾನ್ ಕಿಶನ್ ಅವರನ್ನು ಬ್ಯಾಟಿಂಗ್ಗೆ ಕಳುಹಿಸದಿರುವ ಕಾರಣವನ್ನು ವಿವರಿಸಿದರು.
ಪಂದ್ಯದಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚಿದ್ದರು. ಆರ್ಸಿಬಿ ನೀಡಿದ್ದ ಬೃಹತ್ ಮೊತ್ತವನ್ನು ಟೈ ಮಾಡುವಲ್ಲಿ ಇಶಾನ್ ವಹಿಸಿದ ಪಾತ್ರ ಮಹತ್ವದ್ದಾಗಿದ್ದು. ಆದರೆ ಅಂತಿಮ ಹಂತದಲ್ಲಿ ಎಡವಟ್ಟು ಮಾಡಿದ ಇಶಾನ್ ಕಿಶನ್ ತುಂಬಾ ಅರ್ಹವಾಗಿದ್ದ ಶತಕವನ್ನು ಕೇವಲ ಒಂದು ರನ್ನಿಂದ ಕಳೆದುಕೊಂಡು ನಿರಾಸೆ ಮೂಡಿಸಿದರು.
58 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 9 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ ಭರ್ಜರಿ 99 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇವರಿಗೆ ಉತ್ತಮವಾಗಿ ಸಾಥ್ ನೀಡಿದ್ದ ಕಿರಾನ್ ಪೊಲಾರ್ಡ್ ಅಬ್ಬರದ ಪ್ರದರ್ಶನವನ್ನು ನೀಡಿದ್ದು 24 ಎಸೆತಗಳಲ್ಲಿ 60 ರನ್ ಸಿಡಿಸಿದರು. ಇದರಲ್ಲಿ ಮೂರು ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿತ್ತು.