ಒಂದೇ ಓವರ್: ವಿಲನ್ ಆಗಿದ್ದ ತೇವಾಟಿಯಾ ಹೀರೋ ಆಗ್ಬಿಟ್ಟ!

ಶಾರ್ಜಾ, ಸೆ. 27: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ಕ್ಕೆ ಸಕತ್ ಕಿಕ್ ಸಿಗ್ತಾ ಇರೋದು ಶಾರ್ಜಾ ಮೈದಾನದಲ್ಲಿ ಎಂದರೆ ತಪ್ಪಾಗಲಾರದು. ಮತ್ತೊಮ್ಮೆ ಶಾರ್ಜಾದಲ್ಲಿ ಸಿಕ್ಸರ್ ಮಳೆ ಸುರಿದಿದೆ. ನಾಟಕೀಯ ಬೆಳವಣಿಗೆಗಳ ನಡುವೆ ಒಂದು ಕ್ಷಣ ವಿಲನ್ ಆಗಿದ್ದ ರಾಜಸ್ಥಾನ್ ರಾಯಲ್ಸ್ ಆಟಗಾರ ರಾಹುಲ್ ತೇವಾಟಿಯಾ ಕೊನೆಗೆ ಹೀರೋ ಆಗಿ ಎಲ್ಲರನ್ನು ಅಚ್ಚರಿಗೆ ದೂಡಿದ ಸಂದರ್ಭವನ್ನು ಯಾರೂ ಮರೆಯುವಂತಿಲ್ಲ.
224ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ್ದ ರಾಜಸ್ಥಾನಕ್ಕೆ ಉತ್ತಮ ಆರಂಭ ದೊರೆಯದಿದ್ದರೂ ನಾಯಕ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಗೆಲುವಿನ ಭರವಸೆ ಮೂಡಿಸಿದ್ದರು. ಸ್ಮಿತ್ 27 ಎಸೆತಗಳಲ್ಲಿ 50ರನ್, ಸಂಜು 42 ಎಸೆತಗಳಲ್ಲಿ 85ರನ್(4 ಬೌಂಡರಿ, 7ಸಿಕ್ಸರ್) ಬಾರಿಸಿದ್ದರು. ಆದರೆ, ಬಟ್ಲರ್, ಸ್ಮಿತ್ ನಂತರ ಕ್ರೀಸಿಗೆ ಬಂದ ರಾಹುಲ್ ತೇವಾಟಿಯಾರನ್ನು ಎಲ್ಲರೂ ಪಿಂಚ್ ಹಿಟ್ಟರ್ ಎಂದು ಭಾವಿಸಿದ್ದರು.
ಆದರೆ, ರನ್ ಗಳಿಸಲು ತಿಣುಕಾಡಿದ ತೇವಾಟಿಯಾರನ್ನು ಎಲ್ಲರೂ ಹಳಿಯ ತೊಡಗಿದ್ದರು. ಗೆಲ್ಲೋ ಮ್ಯಾಚ್ ಹಾಳ್ ಮಾಡ್ತಾ ಇದ್ದಾನೆ, ಇವನ್ ಯಾಕ್ ಗುರು ಕಳಿಸಿದ್ರು ಎಂದೆಲ್ಲ ಕಾಮೆಂಟ್ ಗಳು ಬಂದವು, ಹರ್ಷ ಭೋಗ್ಲೆ ಕೂಡಾ ಇದೇ ರೀತಿ ಟ್ವೀಟ್ ಮಾಡಿದ್ದರು.
ಶಾರ್ಜಾದಲ್ಲಿ ಎರಡು ಪಂದ್ಯಗಳಾಗಿದ್ದು, 51ಪ್ಲಸ್ ಸಿಕ್ಸ್ ಗಳು ಬಂದಿವೆ. ಅಬುದಾಭಿ ಹಾಗೂ ದುಬೈ ಮೈದಾನದಲ್ಲಿ 7 ಪಂದ್ಯಗಳಲ್ಲಿ 50 ಸಿಕ್ಸರ್ ಸಿಡಿದಿಲ್ಲ.

ಶೆಲ್ಡನ್ ಕಾಟ್ರೆಲ್ ಒಂದೇ ಓವರ್ ನಲ್ಲಿ 5 ಸಿಕ್ಸರ್
ವೆಸ್ಟ್ ಇಂಡೀಸ್ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಒಂದೇ ಓವರ್ ನಲ್ಲಿ ಎಡಗೈ ಬ್ಯಾಟ್ಸ್ ಮನ್ ತೇವಾಟಿಯಾ 5 ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿಬಿಟ್ಟರು. ಕೊನೆಗೆ 31 ಎಸೆತಗಳಲ್ಲಿ 53 ರನ್ ಗೆಲುವಿನ ಹಾದಿಗೆ ತಂಡವನ್ನು ತಂದು ಔಟಾದರು. ಔಟಾಗುವುದಕ್ಕೂ ಮುನ್ನ ಶಮಿ ಬೌಲಿಂಗ್ ನಲ್ಲೂ ಸಿಕ್ಸ್ ಎತ್ತಿ ನಂತರ ಮಯಾಂಕ್ ಅಗರವಾಲ್ ಗೆ ಕ್ಯಾಚಿತ್ತು ಪೆವಿಲಿಯನ್ ಗೆ ತೆರಳಿದರು.
ಈ ಮುಂಚೆ 2012ರಲ್ಲಿ ರಾಹುಲ್ ಶರ್ಮ ಅವರ ಒಂದೇ ಓವರ್ ನಲ್ಲಿ ಕ್ರಿಸ್ ಗೇಲ್ ಸತತ 5 ಸಿಕ್ಸ್ ಸಿಡಿಸಿದ್ದರು. ಇದಾದ ಬಳಿಕ ಶಾರ್ಜಾದ ಪುಟ್ಟ ಮೈದಾನದಲ್ಲಿ ತೇವಾಟಿಯಾ ತಕಧಿಮಿತ ನೋಡಲು ಸಿಕ್ಕಿತು.

ಆ ಓವರ್ ಬಗ್ಗೆ ತೇವಾಟಿಯಾ ಪ್ರತಿಕ್ರಿಯೆ
ಅದೃಷ್ಟ ಬದಲಾಯಿಸಿ ಒಂದು ಓವರ್: ಆದರೆ, ಟಿ20ಯಲ್ಲಿ ಒಂದು ಓವರ್ ರಾಹುಲ್ ತೇವಾಟಿಯಾ ಹಾಗೂ ರಾಜಸ್ಥಾನ್ ರಾಯಲ್ಸ್ ಅದೃಷ್ಟ ಬದಲಾಯಿಸಿಬಿಟ್ಟಿತು. ಮೊದಲ 23 ಎಸೆತಗಳಲ್ಲಿ 17ರನ್ ಗಳಿಸಿದ್ದ ರಾಹುಲ್ ನಂತರ 8 ಎಸೆತಗಳಲ್ಲಿ 26ರನ್ ಚೆಚ್ಚಿದರು.
''ಮೊದಲ 20 ಎಸೆತಗಳು ನನ್ನ ಜೀವನದಲ್ಲಿ ಎದುರಿಸಿದ ಅತ್ಯಂತ ಕೆಟ್ಟ ಎಸೆತಗಳು, ಆದರೆ ನನಗೆ ನನ್ನ ಮೇಲೆ ನಂಬಿಕೆ ಇತ್ತು ಹೀಗಾಗಿ ಅವಕಾಶಕ್ಕಾಗಿ ಕಾದು ಕ್ರೀಸ್ ನಲ್ಲಿ ಉಳಿದೆ, ಆ ಒಂದು ಓವರ್ ನಲ್ಲಿ ಎಲ್ಲವೂ ಸರಿ ದಾರಿಗೆ ತಂದುಬಿಟ್ಟಿತು. ಇನ್ನು ಸಾಕು ಬಿರುಸಿನ ಆಟವಾಡಲೇ ಬೇಕು ಎಂದು ನಾನು ಸಂಕಲ್ಪ ಮಾಡಿಬಿಟ್ಟೆ'' ಎಂದು ತೇವಾಟಿಯಾ ಸ್ಟಾರ್ ಸ್ಫೋರ್ಟ್ಸ್ ಜೊತೆ ಪಂದ್ಯದ ನಂತರ ಮಾತನಾಡುತ್ತಾ ಪ್ರತಿಕ್ರಿಯಿಸಿದರು.

ಹರ್ಯಾಣ ಮೂಲದ ಆಲ್ ರೌಂಡರ್ ತೇವಾಟಿಯಾ
ಫರಿದಾಬಾದಿನಲ್ಲಿ ಜನಿಸಿರುವ ಎಡಗೈ ಬ್ಯಾಟ್ಸ್ ಮನ್, ಬಲಗೈ ಲೆಗ್ ಸ್ಪಿನ್ನರ್ ರಾಹುಲ್ ತೇವಾಟಿಯಾ(ಈಗ 27 ವರ್ಷ) ಅವರು ಹರ್ಯಾಣ ಪರ ರಣಜಿ ಆಡುವ ಆಟಗಾರ. 2013-14ರ ಋತುವಿನಲ್ಲಿ ಕರ್ನಾಟಕ ವಿರುದ್ಧ ಮೊದಲ ಪಂದ್ಯವಾಡಿ ಕೇವಲ 17 ರನ್ ಗಳಿಸಿದ್ದರು. 2016-17ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದರು. ಲಿಸ್ಟ್ ಎ ಪಂದ್ಯದಲ್ಲಿ ಔಟಾಗದೆ 91ರನ್ ಹೊಡೆದಿರುವುದೇ ಇಲ್ಲಿ ತನಕದ ಸಾಧನೆಯಾಗಿತ್ತು. ಉತ್ತಮ ರನ್ ಸರಾಸರಿ, ವಿಕೆಟ್ ಸರಾಸರಿ ಹೊಂದಿರಲಿಲ್ಲ.

2014ರಲ್ಲೇ ಐಪಿಎಲ್ ಹರಾಜಿನಲ್ಲಿ ಲಕ್
2014ರಲ್ಲೇ ಐಪಿಎಲ್ ಹರಾಜಿನಲ್ಲಿ ಅದೃಷ್ಟ ಖುಲಾಯಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. 2017ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ಪರ ಆಡಿದ್ದರು. 2018ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ತೇವಾಟಿಯಾರನ್ನು ಟ್ರೇಡ್ ಮಾಡಿ ಪುನಃ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕರೆಸಿಕೊಳ್ಳಲಾಯಿತು. ಬಹುಶಃ ಐಪಿಎಲ್ 2020ರಲ್ಲಿ ಚೆನ್ನೈ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದ ರಾಹುಲ್ ಗೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡವಿತ್ತು. ಟಿ20ಯಲ್ಲಿ 49 ಪಂದ್ಯಗಳಿಂದ 33 ವಿಕೆಟ್, 7 ರನ್ ಸರಾಸರಿಯಂತೆ ಪಡೆದಿದ್ದು, 3/18 ಉತ್ತಮ ಪ್ರದರ್ಶನ, ಔಟಾಗದೆ 59ರನ್ (27.30 ರನ್ ಸರಾಸರಿ) ಹೊಂದಿರುವ ರಾಹುಲ್ ಇಂದಿನ ಪಂದ್ಯದಲ್ಲಿ ಸಿಕ್ಸ್ ಎತ್ತಿದ್ದು ನೋಡಿದರೆ ರಾಜಸ್ಥಾನ ತಂಡದ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆ ಹುಸಿಯಾಗಿಲ್ಲ ಎನ್ನಬಹುದು. ಚಿತ್ರದಲ್ಲಿ: ಸಂಜು ಸ್ಯಾಮ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications