
ಚೊಚ್ಚಲ ಟಿ20 ವಿಶ್ವಕಪ್ ಭಾರತಕ್ಕೆ ಒಲಿಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇರಳದ ವೇಗಿ ಶಾಂತಕುಮಾರನ್ ಶ್ರೀಶಾಂತ್, ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧದ ಶಿಕ್ಷೆ ಅನುಭವಿಸಿ ಕ್ರಿಕೆಟ್ಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಅವರೀಗ ತಮ್ಮದೇ ರಾಜ್ಯದ ಪ್ರತಿಭೆಯ ರಾಷ್ಟ್ರೀಯ ತಂಡದಲ್ಲಿರುವುದನ್ನು ನಿರೀಕ್ಷಿಸುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಐಪಿಎಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಒತ್ತಡದ ಸಂದರ್ಭದಲ್ಲಿಯೂ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡುವ ಸಂಜು ಸ್ಯಾಮ್ಸನ್ ಪ್ರತಿಭೆ ಅನೇಕರಲ್ಲಿ ಬೆರಗು ಮೂಡಿಸಿದೆ. ಅವರು 2019ರ ವಿಶ್ವಕಪ್ ತಂಡದಲ್ಲಿ ಇದ್ದಿದ್ದರೆ ಭಾರತವೇ ಟ್ರೋಫಿ ಗೆಲ್ಲುವ ಸಾಧ್ಯತೆ ಇತ್ತು ಎಂದು ಶ್ರೀಶಾಂತ್ ಹೇಳಿದ್ದಾರೆ.

'ಸಂಜು ಸ್ಯಾಮ್ಸನ್ ಅವರನ್ನು ನಾನು ದಶಕದಿಂದ ಬಲ್ಲೆ. ಆತನಿಗೆ 14 ವರ್ಷವಿದ್ದಾಗ ಮುಂದಿನ ಎಂಎಸ್ ಧೋನಿಯಾಗುತ್ತಾನೆ ಎಂದು ನಾನು ಆತನಿಗೆ ಹೇಳಿದ್ದೆ. ಆ ದಿನ ಈಗ ಬಂದಿದೆ. ಈ ಐಪಿಎಲ್ನಲ್ಲಿ ಆತನ ಎರಡು ಅಮೋಘ ಇನ್ನಿಂಗ್ಸ್ ಬಳಿಕ ವಿಶ್ವ ದರ್ಜೆಯ ಆಟಗಾರ ಮೂಡಿದ್ದಾನೆ' ಎಂದು ಸಂಸದ ಶಶಿ ತರೂರ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್. ಶ್ರೀಶಾಂತ್, 'ಅವರು ಮುಂದಿನ ಧೋನಿ ಅಲ್ಲ. ಅವರು ಒಬ್ಬರೇ ಒಬ್ಬ ಸಂಜು ಸ್ಯಾಮ್ಸನ್. ಅವರು 2015ರಿಂದಲೂ ಎಲ್ಲ ಮಾದರಿಯ ಕ್ರಿಕೆಟ್ಗಳಲ್ಲಿಯೂ ಆಡುವಂತಾಗಬೇಕಿತ್ತು. ದಯವಿಟ್ಟು ಅವರನ್ನು ಹೋಲಿಸಬೇಡಿ. ಅವರಿಗೆ ಸರಿಯಾದ ಅವಕಾಶಗಳನ್ನು ನೀಡಿದ್ದರೆ ಅವರು ಭಾರತ ತಂಡದಲ್ಲಿಯೂ ಹೀಗೆಯೇ ಆಡುತ್ತಿದ್ದರು ಮತ್ತು ಭಾರತಕ್ಕೆ ವಿಶ್ವಕಪ್ಗಳನ್ನು ಗೆಲ್ಲಿಸುತ್ತಿದ್ದರು' ಎಂದು ಹೇಳಿದ್ದಾರೆ.