
ಐಪಿಎಲ್ 2020ರಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದ ಸನ್ ರೈಸರ್ಸ್ ಹೈದಾರಾಬಾದ್ ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಅವರು ಟೂರ್ನಮೆಂಟ್ ನಿಂದಲೇ ಹೊರ ಬಿದ್ದಿದ್ದಾರೆ.
ಟೂರ್ನಿಯಲ್ಲಿ ಕರಾರುವಾಕ್ ಬೌಲಿಂಗ್ ದಾಳಿಯ ಮೂಲಕ ಮಿಂಚಿದ್ದ ಭುವಿ ಪಾಲಿಗೆ 13ನೇ ಆವೃತ್ತಿಯ ಐಪಿಎಲ್ ಆಟ ಮುಗಿದಿದೆ. ಸೊಂಟದ ನೋವಿನಿಂದ ಬಳಲುತ್ತಿರುವ ಭುವನೇಶ್ವರ್ ಕುಮಾರ್ ಅವರು ಮುಂದಿನ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಹೈದರಾಬಾದ್ ತಂಡದ ವಕ್ತಾರರು ಖಚಿತಪಡಿಸಿದ್ದಾರೆ.
ಶುಕ್ರವಾರದಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 19ನೇ ಓವರ್ ಬೌಲಿಂಗ್ ನಡೆಸುತ್ತಿದ್ದ ವೇಳೆ ಭುವನೇಶ್ವರ್ ಕುಮಾರ್ ಸ್ನಾಯುಸೆಳೆತಕ್ಕೆ ಒಳಗಾಗಿ ಅರ್ಧಕ್ಕೆ ಬೌಲಿಂಗ್ ನಿಲ್ಲಿಸಿ ಪೆವಿಲಿಯನ್ ಕಡೆಗೆ ತೆರಳಿದ್ದರು. ಒಂದೆರಡು ಬಾರಿ ಬೌಲಿಂಗ್ ಮುಂದುವರಿಸುವ ಪ್ರಯತ್ನಿಸಿದರಾದರೂ ಬಳಿಕ ಸಾಧ್ಯವಾಗಿರಲಿಲ್ಲ. ಮುಂಬೈ ವಿರುದ್ಧದ ಪಂದ್ಯದಲ್ಲೂ ಆಡಲು ಸಾಧ್ಯವಾಗಿರಲಿಲ್ಲ.
ಭುವಿ ಇಲ್ಲದಿರುವುದು ಸನ್ರೈಸರ್ಸ್ ಹೈದರಾಬಾದ್ ಪಾಲಿಗೆ ಹಿನ್ನಡೆಯಾಗಲಿದೆ.. ಭುವಿ ಸ್ಥಾನಕ್ಕೆ ಸಿದ್ಧಾರ್ಥ್ ಕೌಲ್ ಅವರಿಗೆ ಅವಕಾಶ ಸಿಕ್ಕಿದೆ. ಆದರೆ, ಬೌಲಿಂಗ್ ಪಡೆಯಲ್ಲಿ ಅನುಭವದ ಕೊರತೆ ಕಾಡಲಿದೆ.
ಐಪಿಎಲ್ ನಂತರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಲು ಭುವನೇಶ್ವರ್ ಕುಮಾರ್ ಸಿದ್ಧರಾಗಬೇಕಿತ್ತು. ಆ ವೇಳೆಗೆ ಗಾಯದಿಂದ ಚೇತರಿಸಿಕೊಳ್ಳುವ ಭರವಸೆ ವ್ಯಕ್ತವಾಗಿದೆ. 4 ಪಂದ್ಯಗಳ ಟೆಸ್ಟ್ ಸರಣಿ, ಏಕದಿನ ಸರಣಿ, ಟಿ20 ವಿಶ್ವಕಪ್ ಹೀಗೆ ಸಾಲು ಸಾಲು ಸರಣಿಗಳು ಕಾದಿದ್ದು, ಭುವಿ ಗಾಯಗೊಂಡಿರುವುದು ಹೈದರಾಬಾದ್ ಫ್ರಾಂಚೈಸಿಗಷ್ಟೇ ಅಲ್ಲ ಟೀಂ ಇಂಡಿಯಾಕ್ಕೂ ತಲೆನೋವಾಗಿ ಪರಿಣಮಿಸಿದೆ.