
ದುಬೈ: ಸೋಮವಾರ (ಅಕ್ಟೋಬರ್ 5) ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಚೆಂಡಿಗೆ ಭಾಗಶಃ ಎಂಜಲು ಸವರಿದ್ದು ಕಾಣಸಿಕ್ಕಿದೆ.
ಕೊರೊನಾ ಕಾರಣದಿಂದಾಗಿ ಈಗ ಪಂದ್ಯಗಳ ವೇಳೆ ಚೆಂಡಿಗೆ ಎಂಜಲು ಸವರುವುದಕ್ಕೆ ನಿಷೇಧ ಹೇರಲಾಗಿದೆ. ಆದರೆ ಅಭ್ಯಾಸ ಬಲದಿಂದಾಗಿ ಎಂಜಲು ಸವರಲು ಹೊರಟ ಕೊಹ್ಲಿ ಕೊನೇ ಘಳಿಗೆಯಲ್ಲಿ ಕೈ ಹಿಂದೆ ಸರಿಸಿದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಹ್ಲಿ ಚೆಂಡಿಗೆ ಎಂಜಲು ಸವರಲು ಮುಂದಾದ ವಿಡಿಯೋಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ. 'ಪೃಥ್ವಿ ಶಾ ಅವರಿಂದ ಅದ್ಭುತ ಹೊಡೆತ ಇತ್ತು. ಚೆಂಡಿಗೆ ಎಂಜಲು ಸವರಲೆತ್ನಿಸಿದ ಬಳಿಕ ಕೊಹ್ಲಿಯಿಂದ ಮಿಲಿಯನ್ ಡಾಲರ್ ಪ್ರತಿಕ್ರಿಯೆ. ಕೆಲವೊಮ್ಮೆ ಅಭ್ಯಾಸಗಳು ನಮ್ಮನ್ನು ವಶವಾಗಿಸುತ್ತವೆ' ಎಂದು ಸಚಿನ್ ತಮಾಷೆಯಾಗಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ವಾರ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಕೂಡ ಚೆಂಡಿಗೆ ಎಂಜಲು ಸವರಿದ್ದರು. ಕೋಲ್ಕತ್ತಾ ನೈಟ್ ರೈಸರ್ಸ್ ವಿರುದ್ಧ ಉತ್ತಪ್ಪ ತನಗರಿವಿಲ್ಲದಂತೆ ನಿಯಮ ಮೀರಿದ್ದರು. ಆಟಗಾರರು ಚೆಂಡಿಗೆ ಎಂಜಲು ಸವರಿದ್ದು ಕಾಣಿಸಿದರೆ ಆರಂಭದಲ್ಲಿ ಅಂಪೈರ್ ಎಚ್ಚರಿಸುತ್ತಾರೆ. ಆಟಗಾರ ಮತ್ತೆ ಅದೇ ತಪ್ಪು ಮಾಡಿದರೆ ಎದುರಾಳಿ ತಂಡಕ್ಕೆ ಪೆನಾಲ್ಟಿ 5 ರನ್ ಕೊಡುಗೆ ನೀಡಲಾಗುತ್ತದೆ.