
ಈ ಬಾರಿಯ ಟೂರ್ನಿಯ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಮಿಂಚಿದ್ದ ಆರ್ಸಿಬಿ ತಂಡ ಅಂತಿಮ ಹಂತದಲ್ಲಿ ಸೋಲಿನ ಮೇಲೆ ಸೋಲು ಕಂಡಿತು. ಸತತ ನಾಲ್ಕು ಸೋಲು ಕಂಡ ಆರ್ಸಿಬಿ ರನ್ರೇಟ್ ಆಧಾರದಲ್ಲಿ ಪ್ಲೇಆಫ್ ಹಂತಕ್ಕೆ ತಲುಪಿ ಮಾನ ಉಳಿಸಿಕೊಂಡಿದೆ. ಪ್ಲೇಆಫ್ನಲ್ಲಿ ಹೈದರಾಬಾದ್ ತಂಡವನ್ನು ಆರ್ಸಿಬಿ ಎದುರಿಸಲಿದೆ.
ಮಧ್ಯಮ ಕ್ರಮಾಂಕದಲ್ಲಿ ಆರ್ಸಿಬಿ ಇತ್ತೀಚೆಗೆ ಸಾಕಷ್ಟು ತಿಣುಕಾಡುತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಸ್ಪೋಟಕ ಬ್ಯಾಟಿಂಗ್ ನಡೆಸಲು ವಿಫಲರಾಗುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಸ್ಟ್ರೈಕ್ ರೇಟ್ ಕುಸಿಯುತ್ತಿರುವುದು ಆರ್ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಆರ್ಸಿಬಿ ದೊಡ್ಡ ಮೊತ್ತದ ಗುರಿಯನ್ನು ಎದುರಾಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿರಾಟ್ ಕೊಹ್ಲಿಗೆ ಸಲಹೆಯೊಂದನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ಆದಷ್ಟು ಶೀಘ್ರವಾಗಿ ತಮ್ಮ ಗೇರ್ಅನ್ನು ಬದಲಿಸಿಕೊಳ್ಳಬೇಕಿದೆ. ಪ್ರಸಕ್ತ ಅವರಿ 20-25 ಎಸೆತಗಳನ್ನು ಗೇರ್ ಬದಲಿಸಿಕೊಳ್ಳಲು ತೆಗೆದುಕೊಳ್ಳುತ್ತಿದ್ದಾರೆ. ಬಳಿಕ ಅವರು ವಿಕೆಟ್ ಒಪ್ಪಿಸುತ್ತಿದ್ದಾರೆ. ಹೀಗಾಗಿ ತಂಡ ಸಂಕಷ್ಟಕ್ಕೆ ಒಳಗಾಗುತ್ತಿದೆ ಎಂದು ಸೆಹ್ವಾಗ್ ವಿವರಿಸಿದ್ದಾರೆ.
"ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಇದೆ ಆಗಿದೆ. ಅವರು ವಿಕೆಟ್ ಒಪ್ಪಿಸದೇ ಇದ್ದರೆ 40 ಎಸೆತಗಳಲ್ಲಿ 70-8- ರನ್ ಗಳಿಸುತ್ತಿದ್ದರು. ಆಗ ಆರ್ಸಿಬಿ ಗೌರವಯುತ ಮೊತ್ತ ಕಲೆಹಾಕಲು ಸಾಧ್ಯವಾಗುತ್ತಿತ್ತು. ಆದರೆ ಅವರು ವಿಕೆಟ್ ಒಪ್ಪಿಸಿದಾಗ ಅವರ ಸ್ಟ್ರೈಕ್ ರೇಟ್ ಉತ್ತಮವಾಗಿರಲಿಲ್ಲ. ಅದು 110-120 ರ ಆಸುಪಾಸಿನಲ್ಲಿರುತ್ತದೆ. ಹೀಗಾಗಿ ತಂಡ ಸಂಕಟಕ್ಕೆ ಸಿಲುಕುತ್ತದೆ" ಎಂದು ಸೆಹ್ವಾಗ್ ವಿಶ್ಲೇಷಿಸಿದ್ದಾರೆ.