
ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ನಾವು ಗೆಲುವಿನ ಕಡೆಗೆ ಗಮನ ಹರಿಸಿದೆವು, ನೆಟ್ ರನ್ ರೇಟ್ ಕಡೆಗಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಆರ್ಸಿಬಿ ವಿರುದ್ಧ ಡಿಸಿ 6 ವಿಕೆಟ್ಗಳ ಜಯ ದಾಖಲಿಸಿದ ಬಳಿಕ ಐಯ್ಯರ್ ಈ ಹೇಳಿಕೆ ನೀಡಿದ್ದಾರೆ.
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ, ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಜೋಶುವಾ ಫಿಲಿಪ್ 12, ದೇವದತ್ ಪಡಿಕ್ಕಲ್ 50, ವಿರಾಟ್ ಕೊಹ್ಲಿ 29, ಎಬಿ ಡಿ ವಿಲಿಯರ್ಸ್ 35, ಶಿವಂ ದೂಬೆ 17 ರನ್ನೊಂದಿಗೆ 20 ಓವರ್ಗೆ 7 ವಿಕೆಟ್ ಕಳೆದು 152 ರನ್ ಬಾರಿಸಿತ್ತು.
ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 9, ಶಿಖರ್ ಧವನ್ 54, ಅಜಿಂಕ್ಯ ರಹಾನೆ 60, ಮಾರ್ಕಸ್ ಸ್ಟೋಯ್ನಿಸ್ 10, ಶ್ರೇಯಸ್ ಐಯ್ಯರ್ 7, ರಿಷಭ್ ಪಂತ್ 8 ರನ್ನೊಂದಿಗೆ 19 ಓವರ್ಗೆ 4 ವಿಕೆಟ್ ನಷ್ಟದಲ್ಲಿ 154 ರನ್ ಬಾರಿಸಿ ಗೆಲುವನ್ನಾಚರಿಸಿತು. ಇದರೊಂದಿಗೆ ಡೆಲ್ಲಿ ಮತ್ತು ಬೆಂಗಳೂರು ಎರಡೂ ತಂಡಗಳು ಪ್ಲೇ ಆಫ್ಗೆ ಪ್ರವೇಶ ಗಿಟ್ಟಿಸಿಕೊಂಡವು.
ಡೆಲ್ಲಿ ಕ್ಯಾಪಿಟಲ್ಸ್ ಒಂದು ವೇಳೆ 18 ಓವರ್ಗೆ ಮುನ್ನ ಪಂದ್ಯ ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಆಸೆ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಆದರೆ ಪಂದ್ಯ ಬೇಗ ಮುಗಿಸುವ ಅಥವಾ ನೆಟ್ ರನ್ರೇಟ್ ಹೆಚ್ಚಿಸಿಕೊಳ್ಳುವ ಯೋಚನೆಯೇ ನಮ್ಮಲ್ಲಿರಲಿಲ್ಲ. ಬದಲಿಗೆ ಪಂದ್ಯ ಗೆಲುವಿನ ಯೋಚನೆ ಮಾತ್ರ ಇತ್ತು ಎಂದು ಅಯ್ಯರ್ ಹೇಳಿದ್ದಾರೆ.
'ಪ್ರದರ್ಶನ ಖುಷಿ ನೀಡಿದೆ. ಇದು ಮಾಡು ಇಲ್ಲವೆ ಮಡಿ ಪಂದ್ಯ ಎಂದು ನಮಗೆ ತಿಳಿದಿತ್ತು ಮತ್ತು ನಾವು ಗೆಲುವಿನತ್ತ ಗಮನ ಹರಿಸಿದ್ದೇವೆ, ಆದರೆ ನೆಟ್ ರನ್ರೇಟ್ ಕಡೆಗೆ ಅಲ್ಲ. ಟೂರ್ನಿಯ ಮೊದಲಾರ್ಧದಲ್ಲಿ ಪಂದ್ಯಗಳನ್ನು ಗೆದ್ದ ತಂಡಗಳು ಸನ್ನಿವೇಶವನ್ನು ಸಂಪೂರ್ಣವಾಗಿ ಬದಲಾಯಿಸಿದ್ದವು. ಇದು ನಿಜವಾಗಿಯೂ ಸ್ಪರ್ಧಾತ್ಮಕ ಪಂದ್ಯಾವಳಿ,' ಎಂದು ಶ್ರೇಯಸ್ ಹೇಳಿದ್ದಾರೆ.