
ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಐಪಿಎಲ್ ಮುಕ್ತಾಯವಾಗಿದೆ. ಈ ಬಾರಿಯ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಮತ್ತೊಂದು ಬಾರಿಗೆ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಈ ಟೂರ್ನಿಯ ಅದ್ಭುತ ಯಶಸ್ಸಿಗೆ ಕಾರಣವೇನೆಂಬುದನ್ನು ನಾಯಕ ರೋಹಿತ್ ಶರ್ಮಾ ವಿವರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ತಂಡದ ಸಾಧನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ತಂಡದ ಯಶಸ್ಸಿಗೆ ಕಾರಣವಾದ ಸಂಗತಿಯನ್ನೂ ಹೇಳಿದ್ದಾರೆ.
ಗೆಲುವಿಗೆ ಪ್ರತಿಯೊಬ್ಬರಿಗೂ ಧನ್ಯವಾದವನ್ನು ಹೇಳಿದ ರೋಹಿತ್ ಶರ್ಮಾ ನಮ್ಮ ಪಾಲಿಗೆ ಈ ಟೂರ್ನಿ ಶ್ರೇಷ್ಠವಾಗಿತ್ತು ಎಂದಿದ್ದಾರೆ. ನಮಗೆ ಈ ಟೂರ್ನಿಯ ತಯಾರಿ ಆಗಸ್ಟ್ನಿಂದ ಆರಂಭವಾಗಿರಲಿಲ್ಲ.
ಜೂನ್ ನಿಂದಲೇ ನಮ್ಮ ತಯಾರಿಗಳು ಶುರುವಾಗಿತ್ತು. ಇದು ಸುಲಭವಾಗಿರಲಿಲ್ಲ ಎಂದು ಶರ್ಮಾ ಹೇಳಿದ್ದಾರೆ.
"ನಾವು ಇಲ್ಲಿಗೆ ಬಂದಾಗ ಪ್ರತಿಯೊಂದು ಕೂಡ ಹೊಸತಾಗಿತ್ತು. ಹೋಟೆಲ್ಗಿಂತ ಹೊರಗೆ ಹೋಗುವ ಹಾಗಿರಲಿಲ್ಲ. ಹೊರಗಿನ ಸಂಸ್ಕೃತಿಯೊಂದಿಗೆ ಬೆರೆಯುವಂತಿರಲಿಲ್ಲ. ಆದರೆ ನಾವು ತಂಡವಾಗಿ ಸಾಕಷ್ಟು ಶಿಸ್ತನ್ನು ರೂಢಿಸಿಕೊಂಡೆವು. ನಾವು ಅಂಗಳದ ಒಳಗೂ ಶಿಸ್ತಿನಿಂದ ವರ್ತಿಸಿದ್ದೆವು. ಅದೇ ಕಾರಣಕ್ಕಾಗಿ ನಾವು ಇಂದು ಟ್ರೋಫಿಯ ಜೊತೆಗಿದ್ದೇವೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಡೆಲ್ಲಿ ವಿರುದ್ದದ ಫೈನಲ್ ಪಂದ್ಯದಲ್ಲಿ 68 ರನ್ಗಳ ಕೊಡುಗೆಯನ್ನು ನೀಡುವ ಮೂಲಕ ಅದ್ಭುತ ಆಟವನ್ನು ಪ್ರದರ್ಶಿಸಿದರು. ಈ ಕಾರಮದಿಂದಾಗಿ ಐದು ವಿಕೆಟ್ಗಳಿಂದ ಮುಂಬೈ ಸುಲಭವಾದ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿತು. ಈ ಮೂಲಕ ಮುಂಬೈ 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.