
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ಬ್ಯಾಟಿಂಗ್ನಲ್ಲಿ ತೆಗೆದುಕೊಂಡ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹಿಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಎಬಿ ಡಿವಿಲಿಯರ್ಸ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದ್ದರು. ತಂಡದ ಹಾಗೂ ನಾಯಕನ ಈ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಈ ಬೆಳವಣಿಗೆಯ ನಂತರ ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಎಬಿ ಡಿವಿಲಿಯರ್ಸ್ ತಮ್ಮ ಕ್ರಮಾಂಕದ ಬಗ್ಗೆ ಮಾತನಾಡಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕನಾಗಿ ತಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯಲು ಕೂಡ ಸಂತೋಷದಿಂದ ಸಿದ್ಧನಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ನ ಕಾಲಂ ಒಂದಕ್ಕೆ ನೀಡಿದ ಹೇಳಿಕೆಯಲ್ಲಿ ಎಬಿಡಿ ಈ ಬಗ್ಗೆ ತಮ್ಮ ಮಾತುಗಳನ್ನು ದಾಖಲಿಸಿದ್ದಾರೆ. ಆರ್ಸಿಬಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆಗ ನಾನು ಎಂದಿನಂತೆಯೇ ನಾಲ್ಕನೇ ಕ್ರಮಾಂಕದಲ್ಲಿ ಇಳಿಯಲು ಸಜ್ಜಾಗಿದ್ದೆ.. ನಿಜ ಹೇಳಬೇಕೆಂದರೆ 62 ರನ್ಗಳಿಗೆ ನಮ್ಮ ತಂಡದ ಎರಡನೇ ವಿಕೆಟ್ ಬಿದ್ದಾಗ ನಾನು ಬ್ಯಾಟಿಂಗ್ಗೆ ಇಳಿಯಲು ಸಜ್ಜಾಗಿ ಗೇಟ್ನತ್ತ ತೆರಳಿದ್ದೆ' ಎಂದು ಬರೆದುಕೊಂಡಿದ್ದಾರೆ.
"ಆದರೆ ಆ ನಿಖರವಾದ ಸಂದರ್ಭದಲ್ಲಿ ನನಗೆ ನಿಲ್ಲುವಂತೆ ಸೂಚಿಸಲಾಯಿತು. ಯಾಕೆಂದರೆ ಇಬ್ಬರು ಲೆಗ್ ಸ್ಪಿನ್ನರ್ಗಳು ಆ ಸಂದರ್ಭದಲ್ಲಿ ಬೌಲಿಂಗ್ ಮಾಡುತ್ತಿದ್ದ ಕಾರಣ ಎಡಗೈ ಬ್ಯಾಟ್ಸ್ಮನ್ಗಳನ್ನು ಕಣಕ್ಕಿಳಿಸಲು ಕೋಚ್ ಹಾಗೂ ನಾಯಕ ತೀರ್ಮಾನಿಸಿದ್ದರು" ಎಂದು ತಿಳಿಸಿದ್ದಾರೆ.
"ಅದೊಂದು ಕಾನೂನುಬದ್ಧವಾದ ಕ್ರಿಕೆಟ್ನ ನಿರ್ಧಾರ. ಜಗತ್ತಿನ ಎಲ್ಲರೂ ಲೆಗ್ಸ್ಪಿನ್ಗೆ ಎಡಗೈ ದಾಂಡಿಗರನ್ನು ಕಣಕ್ಕಿಳಿಸುತ್ತಾರೆ. ನಾನು ಈ ನಿರ್ಧಾರವನ್ನು ಆ ಸಂದರ್ಭದಲ್ಲೂ ಪ್ರಶ್ನೆ ಮಾಡಿಲ್ಲ. ಈ ಸಂದರ್ಭದಲ್ಲೂ ಮಾಡಲಾರೆ, ಯಾಕೆಂದರೆ ಈ ಬಗ್ಗೆ ನನಗೆ ಯಾವುದೇ ಕಾರಣಕ್ಕೂ ಸಮಸ್ಯೆಯಿಲ್ಲ." ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.