
ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಪಾದಾರ್ಪಣೆ ಪಂದ್ಯದಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಗಮನಾರ್ಹ ಆಟವೇನೂ ಆಡಲಿಲ್ಲ. ಆದರೆ ಜೈಸ್ವಾಲ್ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್ 4ನೇ ಪಂದ್ಯದ ವೇಳೆ ಎಂಎಸ್ ಧೋನಿಗೆ ಜೈಸ್ವಾಲ್ 'ನಮಸ್ತೇ' ಎಂದಿರುವ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ರಾಜಸ್ಥಾನ್ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಮೈದಾನಕ್ಕೆ ಪ್ರವೇಶಿಸಿದ ಸಿಎಸ್ಕೆ ನಾಯಕ ಎಂಎಸ್ ಧೋನಿಗೆ ಎರಡೂ ಕೈಗಳನ್ನು ಜೋಡಿಸಿ ವಿನಮ್ರವಾಗಿ ನಮಸ್ತೇ ಎಂದಿದ್ದು ಕಾಣಿಸಿತ್ತು.
ಪಂದ್ಯದಲ್ಲಿ 6 ಎಸೆತಗಳಿಗೆ ಜೈಸ್ವಾಲ್ 6 ರನ್ ಬಾರಿಸಿದರು. ಆದರೆ ಪಂದ್ಯಕ್ಕೂ ಮುನ್ನ ಜೈಸ್ವಾಲ್ ವಿನಮ್ರ ನಡೆಗೆ ಟ್ವಿಟರ್ನಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಜೈಸ್ವಾಲ್ ಇಲ್ಲಿ ಗಮನ ಸೆಳೆಯಲು ಕಾರಣವೂ ಇದೆ. ಏನೆಂದರೆ ಜೈಸ್ವಾಲ್ ಕಡು ಬಡತನದಿಂದ ಕ್ರಿಕೆಟ್ ರಂಗಕ್ಕೆ ಬಂದವರು.
ತಂದೆಯ ಜೊತೆ ರಸ್ತೆಯಲ್ಲಿ ಪಾನೀಪೂರಿ ಮಾಡಿಕೊಂಡು ಬದುಕು ನಡೆಸಿರುವ ಜೈಸ್ವಾಲ್ ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಐಸಿಸಿ ಅಂಡರ್-19 ವಿಶ್ವಕಪ್ನಲ್ಲಿ ಪಾಲ್ಗೊಂಡಿದ್ದರು. ಇದೇ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ್ದರು. ಕಳೆದ ವರ್ಷ ವಿಜಯ್ ಹಝಾರೆ ಟ್ರೋಫಿಯಲ್ಲೂ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದರು.