ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ 25ನೇ ಪಂದ್ಯ ಗುರುವಾರ ( ಏಪ್ರಿಲ್ 29 ) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 16.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ 7 ವಿಕೆಟ್ಗಳ ಜಯಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಶುಬ್ಮನ್ ಗಿಲ್ ಮತ್ತು ಆ್ಯಂಡ್ರೆ ರಸೆಲ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರನೂ ಸಹ ಉತ್ತಮ ಆಟವನ್ನಾಡಲಿಲ್ಲ. ಶುಬ್ಮನ್ ಗಿಲ್ 38 ಎಸೆತಗಳಲ್ಲಿ 43 ರನ್ ಗಳಿಸಿದರಾದರೂ ನಿಧಾನಗತಿಯ ಬ್ಯಾಟಿಂಗ್ ಎಂಬ ಟೀಕೆಗೆ ಒಳಗಾಗಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯ ಯಾವುದೇ ಪಂದ್ಯದಲ್ಲಿಯೂ ಸಹ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ, ಅದೇ ರೀತಿ ಈ ಪಂದ್ಯದಲ್ಲಿಯೂ ಸಹ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ಸಹ ಕೈ ಕೊಟ್ಟರು. ಕೊಲ್ಕತ್ತಾ ಪರ ಕೊನೆಯಲ್ಲಿ ಆ್ಯಂಡ್ರೆ ರಸೆಲ್ 27 ಎಸೆತಗಳಲ್ಲಿ 45 ರನ್ ಬಾರಿಸಿದ ಕಾರಣ ತಂಡದ ಮೊತ್ತ ಕೊಂಚ ಹೆಚ್ಚಿತು. ಈ ಮೂಲಕ ಕೊಲ್ಕತ್ತಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಸಾಧಾರಣ 154 ರನ್ಗಳನ್ನು ಗಳಿಸಿತು.
ಈ ಪಂದ್ಯ ಮುಗಿದ ಬಳಿಕ ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅತಿ ಬೇಸರವನ್ನುಂಟುಮಾಡುವ ತಂಡ ಎಂದು ವಿರೇಂದ್ರ ಸೆಹ್ವಾಗ್ ಟೀಕಿಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ತುಂಬಾ ನಿಧಾನಗತಿಯದ್ದಾಗಿದ್ದು ಮುಂದಿನ ಕೊಲ್ಕತ್ತಾ ಪಂದ್ಯಗಳನ್ನು ಫಾಸ್ಟ್ ಫಾರ್ವರ್ಡ್ ಮಾಡಿ ನೋಡಬೇಕು ಎಂದು ಕಾಲೆಳೆದಿದ್ದಾರೆ. ಸಿನಿಮಾಗಳಲ್ಲಿ ಬೇಸರವನ್ನುಂಟುಮಾಡುವ ದೃಶ್ಯಗಳನ್ನು ಹೇಗೆ ಫಾಸ್ಟ್ ಫಾರ್ವರ್ಡ್ ಮಾಡಿ ನೋಡುತ್ತೇವೋ ಅದೇರೀತಿ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ನ್ನು ಫಾಸ್ಟ್ ಫಾರ್ವರ್ಡ್ ಮಾಡಿ ನೋಡಬೇಕು ಎಂದು ವಿರೇಂದ್ರ ಸೆಹ್ವಾಗ್ ಟೀಕಿಸಿದ್ದಾರೆ.