29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕೊರೊನಾವೈರಸ್ ಕಾರಣದಿಂದ ಮುಂದೂಡಲಾಗಿದೆ. ಈ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ 29 ಪಂದ್ಯಗಳಲ್ಲಿ ಕೆಲ ಅನ್ಕ್ಯಾಪ್ಡ್ ಆಟಗಾರರು ತೋರಿಸಿದ ಅತ್ಯದ್ಭುತ ಪ್ರದರ್ಶನವನ್ನು ನೀವು ನೋಡಿರುತ್ತೀರಿ. ಅನ್ಕ್ಯಾಪ್ಡ್ ಆಟಗಾರರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್, ರಾಜಸ್ಥಾನ್ ರಾಯಲ್ಸ್ ತಂಡದ ಚೇತನ್ ಸಕಾರಿಯಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಿಂಚಿ ಕ್ರೀಡಾಭಿಮಾನಿಗಳ ಗಮನವನ್ನು ಸೆಳೆದರು.
ಅದರಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರು. ಐಪಿಎಲ್ ಆರಂಭದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಇಶಾಂತ್ ಶರ್ಮಾ ಅಲಭ್ಯರಾಗಿದ್ದಾಗ ಅವೇಶ್ ಖಾನ್ ಅವರಿಗೆ ಅವಕಾಶವನ್ನು ನೀಡಲಾಯಿತು, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅವೇಶ್ ಖಾನ್ 8 ಪಂದ್ಯಗಳನ್ನಾಡಿ 14 ವಿಕೆಟ್ ಪಡೆದರು. ಹೀಗೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅವೇಶ್ ಖಾನ್ 2 ಪಂದ್ಯಗಳಲ್ಲಿ 3 ವಿಕೆಟ್ಗಳ ಗೊಂಚಲನ್ನೂ ಸಹ ಪಡೆದಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಕೂಡ ಅವೇಶ್ ಖಾನ್ ಪ್ರದರ್ಶನದ ಕುರಿತು ಮಾತನಾಡಿದ್ದು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಕಡೆಗಣಿಸಲ್ಪಟ್ಟ ಆಟಗಾರ ಎಂದಿದ್ದಾರೆ. 'ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ ಹಾಗೂ ಕಗಿಸೊ ರಬಾಡ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ ಆದರೆ ಅವೇಶ್ ಖಾನ್ ಬಗ್ಗೆ ಯಾರೊಬ್ಬರೂ ಮಾತನಾಡಲಿಲ್ಲ, ಹೀಗಾಗಿ ಆತ ಪ್ರಸ್ತುತ ಟೂರ್ನಿಯಲ್ಲಿ ಕಡೆಗಣಿಸಲ್ಪಟ್ಟ ಆಟಗಾರನಾಗಿ ಉಳಿದಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲಿಯೂ ಸಹ 2-3 ವಿಕೆಟ್ಗಳನ್ನು ಪಡೆದ ಅವೇಶ್ ಖಾನ್ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಸಹ ಆತನನ್ನು ಯಾರೂ ಸರಿಯಾಗಿ ಗುರುತಿಸಲಿಲ್ಲ' ಎಂದು ವಿರೇಂದ್ರ ಸೆಹ್ವಾಗ್ ಅವೇಶ್ ಖಾನ್ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.