
ಐಪಿಎಲ್ನಲ್ಲಿ ಭಾಗಿಯಾಗಿದ್ದ ಎಲ್ಲಾ ದೇಶದ ಆಟಗಾರರು ಈಗ ತಮ್ಮ ತಮ್ಮ ದೇಶಗಳತ್ತ ವಾಪಾಸಾಗುತ್ತಿದ್ದಾರೆ. ಬಾಂಗ್ಲಾದೇಶರ ಇಬ್ಬರು ಕ್ರಿಕೆಟಿಗರು ಕೂಡ ಚಾರ್ಟರ್ಡ್ ವಿಮಾನದ ಮೂಲಕ ಢಾಕಾಗೆ ಮರಳಿದ್ದು ಯಶಸ್ವಿಯಾಗಿ ತವರಿಗೆ ವಾಪಾಸಾಗಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಬಾಂಗ್ಲಾದೇಶದಿಂದ ಕೇವಲ ಇಬ್ಬರು ಆಟಗಾರರು ಮಾತ್ರವೇ ಐಪಿಎಲ್ನಲ್ಲಿ ಅವಕಾಶವನ್ನು ಪಡೆದುಕೊಂಡಿದ್ದರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಶಕೀಬ್ ಅಲ್ ಹಸನ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಮುಸ್ತಫಿಜುರ್ ರಹ್ಮಾನ್ ಕಣಕ್ಕಿಳಿದಿದ್ದರು. ಈ ಇಬ್ಬರು ಆಟಗಾರರು ಕೂಡ ಬಾಂಗ್ಲಾದೇಶಕ್ಕೆ ವಾಪಾಸಾಗಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಕಾರಣದಿಂದಾಗಿ ಭಾರತದಿಂದ ತೆರಳುವ ನಾಗರೀಕ ವಿಮಾನಗಳನ್ನು ಬಾಂಗ್ಲಾದೇಶ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಹೀಗಾಗಿ ಈ ಆಟಗಾರರು ಚಾರ್ಟೆಡ್ ವಿಮಾನದ ಮೂಲಕ ಢಾಕಾಗೆ ತೆರಳಿದ್ದಾರೆ. ಮೂಲಗಳ ಮಾಹಿತಿಯ ಪ್ರಕಾರ ಈ ಇಬ್ಬರು ಆಟಗಾರರು ಕೂಡ ಬಾಂಗ್ಲಾದೇಶದಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿದೆ.
ಈ ಇಬ್ಬರು ಆಟಗಾರರಿಗೆ ದೆಹಲಿಯಿಂದ ಚಾರ್ಟರ್ಡ್ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಟೂರ್ನಿ ಮುಂದೂಡುವ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ದೆಹಲಿಯಲ್ಲಿ ಪಂದ್ಯವನ್ನಾಡುತ್ತಿದ್ದ ಕಾರಣ ಮುಸ್ತಫಿಜುರ್ ರಹ್ಮಾನ್ ದೆಹಲಿಯಲ್ಲಿಯೇ ಇದ್ದರು. ಅಹ್ಮದಾಬಾದ್ನಲ್ಲಿದ್ದ ಶಕೀಬ್ ಅಲ್ ಹಸನ್ ದೆಹಲಿಗೆ ತೆರಳಿ ಅಲ್ಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಬಾಂಗ್ಲಾದೇಶಕ್ಕೆ ಹಾರಿದ್ದಾರೆ.