
ಐಪಿಎಲ್ನಲ್ಲಿ ಪಾಲ್ಗೊಂಡಿರುವ ಎಲ್ಲಾ ವಿದೇಶಿ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಮಂಗಳವಾರ ಬಿಸಿಸಿಐ ಸ್ಪಷ್ಟವಾದ ಭರವಸೆಯನ್ನು ನೀಡಿದೆ. ಐಪಿಎಲ್ ಟೂರ್ನಿ ಅಂತ್ಯವಾದ ಬಳಿಕ ಆಯಾಯ ದೇಶಗಳಿಗೆ ಆಟಗಾರರನ್ನು ಸುರಕ್ಷಿತವಾಗಿ ತಲುಪುವಂತೆ ಮಾಡುವ ಭರವಸೆಯನ್ನು ಬಿಸಿಸಿಐ ನೀಡಿದೆ.
ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿರುವ ಕ್ರಿಸ್ ಲೀನ್ ಐಪಿಎಲ್ ಅಂತ್ಯದ ನಂತರ ಆಸ್ಟ್ರೇಲಿಯಾ ಸರ್ಕಾರದ ಬಳಿ ಚಾರ್ಟರ್ಡ್ ಫ್ಲೈಟ್ ಮೂಲಕ ತವರಿಗೆ ಮರಳುವ ವ್ಯವಸ್ಥೆಯನ್ನು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಇದು ಆಸ್ಟ್ರೇಲಿಯಾ ಕ್ರಿಕೆಟ್ ತಮಡದ ಪ್ರವಾಸವಾಗಿಲ್ಲದ ಕಾರಣ ವಿಶೇಷ ವಿಮಾನದ ವ್ಯವಸ್ಥೆ ಅಸಾಧ್ಯ ಎಂದು ಆಸ್ಟ್ರೇಲಿಯಾ ಪ್ರಧಾನಿ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದ್ದರು.
"ಪಂದ್ಯಾವಳಿ ಮುಕ್ತಾಯದ ನಂತರ ತವರಿಗೆ ಹೇಗೆ ಮರಳುವುದು ಎಂಬ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಆಟಗಾರರಿಗೆ ಆತಂಕವಿದೆ ಎಂದು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಈ ವಿಚಾರವಾಗಿ ನೀವು ಚಿಂತೆ ಪಡುವುದು ಬೇಡ ಎಂದು ನಾವು ತಿಳಿಸಲು ಬಯಸುತ್ತೇವೆ" ಎಂದು ಬಿಸಿಸಿಐ ಸಿಒಒ ಆಟಗಾರರಿಗೆ ಪತ್ರವನ್ನು ಬರೆದು ಭರವಸೆ ನೀಡಿದ್ದಾರೆ.
" ಪ್ರತಿಯೊಬ್ಬ ಆಟಗಾರ ಹಾಗೂ ಸಿಬ್ಬಂದಿಗೂ ನಿಮ್ಮ ನಿಮ್ಮ ದೇಶಗಳಿಗೆ ನಿಮ್ಮ ಮನೆಗೆ ಸುರಕ್ಷಿತವಾಗಿ ಹಾಗೂ ನೀವು ಅಂದುಕೊಂಡಂತೆಯೇ ಮರಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಬಿಸಿಸಿಐ ಮಾಡುತ್ತದೆ. ಬಿಸಿಸಿಐ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಟೂರ್ನಮೆಂಟ್ ಅಂತ್ಯದ ಬಳಿಕ ವಾಪಾಸಾಗಲು ಬೇಕಾದ ವ್ಯವಸ್ಥೆಗಳನ್ನು ಮಾಡಲು ಸರ್ಕಾರದ ಜೊತೆಗೆ ಕಾರ್ಯನಿರತವಾಗಿದೆ" ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.
ಮಂಗಳವಾರ ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ಆಸ್ಟ್ರೇಲಿಯಾಗೆ ತೆರಳುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ನಿರ್ಬಂಧಿಸಿದೆ. ಮೇ 15ರ ವರೆಗೂ ಈ ನಿಷೇಧವನ್ನು ಹೇರಲಾಗಿದೆ.