
4 ಎಸೆತಗಳಲ್ಲಿ 12 ರನ್ ಬಾರಿಸಲು ವಿಫಲರಾದ ಎಬಿ ಡಿ ವಿಲಿಯರ್ಸ್!
ಹೀಗೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 4 ಎಸೆತಗಳಲ್ಲಿ 12 ರನ್ ಬಾರಿಸಬೇಕಾದ ಅಗತ್ಯವಿತ್ತು. ಎಬಿ ಡಿವಿಲಿಯರ್ಸ್ ಸ್ಟ್ರೈಕ್ ಪಡೆದುಕೊಂಡದ್ದರಿಂದ ರನ್ ಚೇಸ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯೂ ಇತ್ತು. ಆದರೆ ಭುವನೇಶ್ವರ್ ಕುಮಾರ್ ಎಸೆದ ಕೊನೆಯ 4 ಎಸೆತಗಳಲ್ಲಿ ಎಬಿ ಡಿ ವಿಲಿಯರ್ಸ್ ಕ್ರಮವಾಗಿ 0, 6, 0 ಮತ್ತು 1 ರನ್ ಬಾರಿಸಲಷ್ಟೇ ಶಕ್ತರಾದರು. ಹೀಗೆ ಅಂತಿಮ 4 ಎಸೆತಗಳಲ್ಲಿ ಭುವನೇಶ್ವರ್ ಕುಮಾರ್ ಕೇವಲ 7 ರನ್ ನೀಡಿದರು ಮತ್ತು ಎಬಿ ಡಿವಿಲಿಯರ್ಸ್ 4 ಎಸೆತಗಳಲ್ಲಿ 12 ರನ್ ಬಾರಿಸಲು ವಿಫಲರಾದರು.

ಎಬಿ ಡಿವಿಲಿಯರ್ಸ್ ರನ್ ಬಾರಿಸದಂತೆ ಭುವನೇಶ್ವರ್ ಕುಮಾರ್ ಮಾಡಿದ ಯೋಜನೆ ಹೀಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿದ ನಂತರ ಮಾತನಾಡಿದ ಭುವನೇಶ್ವರ್ ಕುಮಾರ್ ಎಬಿ ಡಿವಿಲಿಯರ್ಸ್ ವಿರುದ್ಧ ತಾವು ಹೆಣೆದ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ. 'ಎಬಿ ಡಿವಿಲಿಯರ್ಸ್ ಅವರಿಗೆ ಬೌಲಿಂಗ್ ಮಾಡಬೇಕಾದರೆ ಇತರೆ ಯಾವುದೇ ಬ್ಯಾಟ್ಸ್ಮನ್ಗಳಿಗೂ ಮಾಡದಷ್ಟು ಯೋಜನೆಯನ್ನು ಮಾಡುತ್ತೇವೆ. ಆ ಸಂದರ್ಭದಲ್ಲಿ ನಾನು ಒತ್ತಡಕ್ಕೆ ಒಳಗಾಗಿರಲಿಲ್ಲ ಎಂದರೆ ಖಂಡಿತವಾಗಿಯೂ ನಾನು ಸುಳ್ಳು ಹೇಳುತ್ತಿದ್ದೇನೆ ಎಂಬುದು ಪ್ರತಿಯೊಬ್ಬರಿಗೂ ತಿಳಿದುಬಿಡುತ್ತದೆ. ಆ ಸಂದರ್ಭದಲ್ಲಿ ನಾನು ಅಗಲವಾದ ಯಾರ್ಕರ್ ಎಸೆತಗಳನ್ನು ಎಸೆಯಲು ಯೋಜನೆಯನ್ನು ಹಾಕಿಕೊಂಡು ಅದೇ ರೀತಿ ಬೌಲಿಂಗ್ ಮಾಡಿದೆ. ಆದರೆ ಮೂರನೇ ಎಸೆತವನ್ನು ಅಗಲವಾದ ಯಾರ್ಕರ್ ಹಾಕದೇ ನೇರವಾಗಿ ಎಸೆದ ಕಾರಣ ಎಬಿ ಡಿವಿಲಿಯರ್ಸ್ ಸಿಕ್ಸರ್ ಬಾರಿಸಿದರು. ಹೀಗಾಗಿ ಮತ್ತೆ ನಾನು ನನ್ನ ಯೋಜನೆಯ ಪ್ರಕಾರ ಉಳಿದ ಎಸೆತಗಳನ್ನು ಅಗಲ ಯಾರ್ಕರ್ ಎಸೆತಗಳನ್ನು ಎಸೆದೆ ಮತ್ತು ಅದು ಫಲವನ್ನು ನೀಡಿತು' ಎಂದು ಭುವನೇಶ್ವರ್ ಕುಮಾರ್ ಎಬಿ ಡಿವಿಲಿಯರ್ಸ್ ವಿರುದ್ಧ ತಾವು ಹೆಣೆದ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.

ಎಬಿಡಿ ಬ್ಯಾಟಿಂಗ್ ಕುರಿತು ಕೊಹ್ಲಿ ಹೇಳಿದ್ದಿಷ್ಟು
'ಎಬಿ ಡಿವಿಲಿಯರ್ಸ್ ಕಣದಲ್ಲಿದ್ದಾಗ ತಂಡ ಪಂದ್ಯದಿಂದ ಹೊರ ಬಿದ್ದಿದೆ ಎಂದು ಹೇಳುವ ಹಾಗೇ ಇಲ್ಲ. ಆದರೆ ಇಂತಹ ಪಂದ್ಯಗಳಲ್ಲಿ ಈಗಾಗಲೇ ಪಿಚ್ಗೆ ಹೊಂದಿಕೊಂಡು ವೇಗದ ರನ್ ಗಳಿಸುತ್ತಿರುವ ಬ್ಯಾಟ್ಸ್ಮನ್ ಇದ್ದರೆ ಮಾತ್ರ ಗೆಲುವು ನಮ್ಮದಾಗುತ್ತಿತ್ತು' ಎಂದು ವಿರಾಟ್ ಕೊಹ್ಲಿ ಪಂದ್ಯೋತ್ತರ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications
