ಅಂತಿಮ ಓವರ್ನಲ್ಲಿ ಎಬಿಡಿ ರನ್ ಗಳಿಸಲು ಪರದಾಡುವ ರೀತಿ ತಾನು ಮಾಡಿದ ಪ್ಲಾನ್ ಬಹಿರಂಗಪಡಿಸಿದ ಭುವಿ

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 52ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯ ಆರಂಭವಾಗುವ ಮುನ್ನ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯ ಸಾಧಿಸಲಿದೆ ಎಂದು ಎಲ್ಲರೂ ಊಹಿಸಿದ್ದರು.
ಆದರೆ ಸಾಲು ಸಾಲು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಸೀಮಿತವಾಗಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಂತಿಮ ಓವರ್ನಲ್ಲಿ ರೋಚಕವಾಗಿ ಗೆಲುವು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ತಲುಪುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾದಿಗೆ ಮುಳುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಜೇಸನ್ ರಾಯ್ ಮತ್ತು ಕೇನ್ ವಿಲಿಯಮ್ಸನ್ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ್ದ 142 ರನ್ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಲಭವಾಗಿ ಬೆನ್ನಟ್ಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಂತಿಮವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ರನ್ಗಳ ಅಂತರದ ಸೋಲನ್ನು ಅನುಭವಿಸಿತು.
ಗ್ಲೆನ್ ಮ್ಯಾಕ್ಸ್ವೆಲ್ ಔಟ್ ಆದ ನಂತರ ಇಡೀ ಪಂದ್ಯ ಎಬಿ ಡಿವಿಲಿಯರ್ಸ್ ಆಟದ ಮೇಲೆ ನಿರ್ಧರಿತವಾಗಿತ್ತು. ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಯಾವುದೇ ಹಂತದಲ್ಲಾದರೂ ಅಬ್ಬರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡುವ ಸಾಧ್ಯತೆಗಳಿತ್ತು. ಪಂದ್ಯದ ಅಂತಿಮ ಓವರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 13 ರನ್ಗಳ ಅಗತ್ಯತೆ ಇತ್ತು. ಆ ಸಮಯದಲ್ಲಿ ಬ್ಯಾಟ್ಸ್ಮನ್ ಜಾರ್ಜ್ ಗಾರ್ಟನ್ ಆಗಿದ್ದರೂ ಸಹ ನಾನ್ ಸ್ಟ್ರೈಕ್ ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಇದ್ದ ಕಾರಣ ಕೇನ್ ವಿಲಿಯಮ್ಸನ್ ಭುವನೇಶ್ವರ್ ಕುಮಾರ್ ಅವರನ್ನು ನಂಬಿ ಬೌಲಿಂಗ್ ಮಾಡಲು ಹೇಳಿದರು.
ಹೀಗೆ ಪಂದ್ಯದ ಅಂತಿಮ ಹಾಗೂ ರೋಚಕ ಓವರ್ ಮಾಡಿದ ಭುವನೇಶ್ವರ್ ಕುಮಾರ್ ಕೇವಲ 8 ರನ್ ನೀಡಿ ಸನ್ ರೈಸರ್ಸ್ ಹೈದರಾಬಾದ್ ತಂಡ 4 ರನ್ಗಳ ಅಂತರದಿಂದ ಗೆಲ್ಲಲು ಪ್ರಮುಖ ಕಾರಣರಾದರು. ಅಂತಿಮ ಓವರ್ನ ಮೊದಲನೇ ಎಸೆತವನ್ನು ಜಾರ್ಜ್ ಗಾರ್ಟನ್ ಅವರಿಗೆ ಎಸೆದ ಭುವನೇಶ್ವರ್ ಕುಮಾರ್ ಯಾವುದೇ ರನ್ ನೀಡಲಿಲ್ಲ ಮತ್ತು ಎರಡನೇ ಎಸೆತದಲ್ಲಿ ಜಾರ್ಜ್ ಗಾರ್ಟನ್ 1 ರನ್ ತೆಗೆದುಕೊಂಡರು. ಈ ಮೂಲಕ ಎಬಿ ಡಿವಿಲಿಯರ್ಸ್ ಸ್ಟ್ರೈಕ್ ತೆಗೆದುಕೊಂಡರು ಮತ್ತು ಆ ಸಂದರ್ಭದಲ್ಲಿ 4 ಎಸೆತಗಳಲ್ಲಿ 12 ರನ್ಗಳ ಅಗತ್ಯತೆ ಇತ್ತು. ಈ ರನ್ ನುರಿತ ಎಬಿ ಡಿವಿಲಿಯರ್ಸ್ ಅವರಿಗೆ ತೀರಾ ಕಷ್ಟಕರವೇನಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಭುವನೇಶ್ವರ್ ಕುಮಾರ್ ಎಬಿ ಡಿವಿಲಿಯರ್ಸ್ ರನ್ ಬಾರಿಸದಂತೆ ಹೆಣೆದ ಯೋಜನೆಯನ್ನು ಪಂದ್ಯದ ನಂತರ ಬಿಚ್ಚಿಟ್ಟಿದ್ದಾರೆ.

4 ಎಸೆತಗಳಲ್ಲಿ 12 ರನ್ ಬಾರಿಸಲು ವಿಫಲರಾದ ಎಬಿ ಡಿ ವಿಲಿಯರ್ಸ್!
ಹೀಗೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 4 ಎಸೆತಗಳಲ್ಲಿ 12 ರನ್ ಬಾರಿಸಬೇಕಾದ ಅಗತ್ಯವಿತ್ತು. ಎಬಿ ಡಿವಿಲಿಯರ್ಸ್ ಸ್ಟ್ರೈಕ್ ಪಡೆದುಕೊಂಡದ್ದರಿಂದ ರನ್ ಚೇಸ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆಯೂ ಇತ್ತು. ಆದರೆ ಭುವನೇಶ್ವರ್ ಕುಮಾರ್ ಎಸೆದ ಕೊನೆಯ 4 ಎಸೆತಗಳಲ್ಲಿ ಎಬಿ ಡಿ ವಿಲಿಯರ್ಸ್ ಕ್ರಮವಾಗಿ 0, 6, 0 ಮತ್ತು 1 ರನ್ ಬಾರಿಸಲಷ್ಟೇ ಶಕ್ತರಾದರು. ಹೀಗೆ ಅಂತಿಮ 4 ಎಸೆತಗಳಲ್ಲಿ ಭುವನೇಶ್ವರ್ ಕುಮಾರ್ ಕೇವಲ 7 ರನ್ ನೀಡಿದರು ಮತ್ತು ಎಬಿ ಡಿವಿಲಿಯರ್ಸ್ 4 ಎಸೆತಗಳಲ್ಲಿ 12 ರನ್ ಬಾರಿಸಲು ವಿಫಲರಾದರು.

ಎಬಿ ಡಿವಿಲಿಯರ್ಸ್ ರನ್ ಬಾರಿಸದಂತೆ ಭುವನೇಶ್ವರ್ ಕುಮಾರ್ ಮಾಡಿದ ಯೋಜನೆ ಹೀಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿದ ನಂತರ ಮಾತನಾಡಿದ ಭುವನೇಶ್ವರ್ ಕುಮಾರ್ ಎಬಿ ಡಿವಿಲಿಯರ್ಸ್ ವಿರುದ್ಧ ತಾವು ಹೆಣೆದ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ. 'ಎಬಿ ಡಿವಿಲಿಯರ್ಸ್ ಅವರಿಗೆ ಬೌಲಿಂಗ್ ಮಾಡಬೇಕಾದರೆ ಇತರೆ ಯಾವುದೇ ಬ್ಯಾಟ್ಸ್ಮನ್ಗಳಿಗೂ ಮಾಡದಷ್ಟು ಯೋಜನೆಯನ್ನು ಮಾಡುತ್ತೇವೆ. ಆ ಸಂದರ್ಭದಲ್ಲಿ ನಾನು ಒತ್ತಡಕ್ಕೆ ಒಳಗಾಗಿರಲಿಲ್ಲ ಎಂದರೆ ಖಂಡಿತವಾಗಿಯೂ ನಾನು ಸುಳ್ಳು ಹೇಳುತ್ತಿದ್ದೇನೆ ಎಂಬುದು ಪ್ರತಿಯೊಬ್ಬರಿಗೂ ತಿಳಿದುಬಿಡುತ್ತದೆ. ಆ ಸಂದರ್ಭದಲ್ಲಿ ನಾನು ಅಗಲವಾದ ಯಾರ್ಕರ್ ಎಸೆತಗಳನ್ನು ಎಸೆಯಲು ಯೋಜನೆಯನ್ನು ಹಾಕಿಕೊಂಡು ಅದೇ ರೀತಿ ಬೌಲಿಂಗ್ ಮಾಡಿದೆ. ಆದರೆ ಮೂರನೇ ಎಸೆತವನ್ನು ಅಗಲವಾದ ಯಾರ್ಕರ್ ಹಾಕದೇ ನೇರವಾಗಿ ಎಸೆದ ಕಾರಣ ಎಬಿ ಡಿವಿಲಿಯರ್ಸ್ ಸಿಕ್ಸರ್ ಬಾರಿಸಿದರು. ಹೀಗಾಗಿ ಮತ್ತೆ ನಾನು ನನ್ನ ಯೋಜನೆಯ ಪ್ರಕಾರ ಉಳಿದ ಎಸೆತಗಳನ್ನು ಅಗಲ ಯಾರ್ಕರ್ ಎಸೆತಗಳನ್ನು ಎಸೆದೆ ಮತ್ತು ಅದು ಫಲವನ್ನು ನೀಡಿತು' ಎಂದು ಭುವನೇಶ್ವರ್ ಕುಮಾರ್ ಎಬಿ ಡಿವಿಲಿಯರ್ಸ್ ವಿರುದ್ಧ ತಾವು ಹೆಣೆದ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.

ಎಬಿಡಿ ಬ್ಯಾಟಿಂಗ್ ಕುರಿತು ಕೊಹ್ಲಿ ಹೇಳಿದ್ದಿಷ್ಟು
'ಎಬಿ ಡಿವಿಲಿಯರ್ಸ್ ಕಣದಲ್ಲಿದ್ದಾಗ ತಂಡ ಪಂದ್ಯದಿಂದ ಹೊರ ಬಿದ್ದಿದೆ ಎಂದು ಹೇಳುವ ಹಾಗೇ ಇಲ್ಲ. ಆದರೆ ಇಂತಹ ಪಂದ್ಯಗಳಲ್ಲಿ ಈಗಾಗಲೇ ಪಿಚ್ಗೆ ಹೊಂದಿಕೊಂಡು ವೇಗದ ರನ್ ಗಳಿಸುತ್ತಿರುವ ಬ್ಯಾಟ್ಸ್ಮನ್ ಇದ್ದರೆ ಮಾತ್ರ ಗೆಲುವು ನಮ್ಮದಾಗುತ್ತಿತ್ತು' ಎಂದು ವಿರಾಟ್ ಕೊಹ್ಲಿ ಪಂದ್ಯೋತ್ತರ ಸಂದರ್ಶನದಲ್ಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications