
ಈ ಬಾರಿಯ ಆವೃತ್ತಿಗೆ ಕನ್ನಡಿಗ ಕೆ ಗೌತಮ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಕಳೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೌತಮ್ ಬರೊಬ್ಬರಿ 9.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ಗೆ ಸೇರಿಕೊಂಡಿದ್ದಾರೆ. ಹೀಗಾಗಿ ಧೋನಿ ನಾಯಕತ್ವದಲ್ಲಿ ಆಡಲು ಗೌತಮ್ ಉತ್ಸುಕರಾಗಿದ್ದಾರೆ. ಈ ಸಂದರ್ಭದಲ್ಲಿ ನಾಯಕ ಧೋನಿಯ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಸೋಮವಾರ ಪ್ರತಿಕ್ರಿಯೆ ನೀಡಿದ ಕೆ ಗೌತಮ್, ಧೋನಿ ನಾಯಕತ್ವದಲ್ಲಿ ಆಡಲು ಬೌಲರ್ಗಳು ಇಷ್ಟ ಪಡುತ್ತಾರೆ, ನಾನು ಕೂಡ ಅದರಿಂದ ಹೊರತಾಗಿಲ್ಲ. ಬೌಲರ್ಗಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಧೋನಿ ವಿಶೇಷ ಪರಿಣತಿ ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಆಟಗಾರ ಕೆ ಗೌತಮ್ ಸಾಕಷ್ಟು ಭರವಸೆಯನ್ನು ಮೂಡಿಸಿದ ಆಟಗಾರ. ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದ ಗೌತಮ್ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಆಡಲಿಳಿದಿದ್ದರು. ಬಳಿಕ ದೇಶೀಯ ಕ್ರಿಕೆಟ್ ಟೂರ್ನಿಗಳಾದ ಸಯ್ಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲೂ ಗೌತಮ್ ಹೇಳಿಕೊಳ್ಳುವಂತಾ ಪ್ರದರ್ಶನವನ್ನೇನೂ ನೀಡಿರಲಿಲ್ಲ. ಆದರೆ ಈ ಬಾರಿ ದೊಡ್ಡ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿರುವುದರಿಂದ ಗೌತಮ್ ಪ್ರದರ್ಶನದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.
"ಚೆನ್ನೈ ಸೂಪರ್ ಕಿಂಗ್ಸ್ ತರಹದ ತಂಡದಲ್ಲಿ ಆಡುವ ಹಿನ್ನೆಲೆಯಲ್ಲಿ ನಾನು ಯಾವುದೇ ನಿರೀಕ್ಷೆಯ ಒತ್ತಡವನ್ನು ಅನುಭವಿಸುತ್ತಿಲ್ಲ. ಇದು ಧೋನಿ ನಾಯಕತ್ವದಲ್ಲಿ ಆಡಬೇಕು ಎಂಬ ನನ್ನ ಕನಸು ನನಸಾಗುತ್ತಿರುವ ಕ್ಷಣ ಇದು" ಎಂದು ಸಿಎಸ್ಕೆ ತಂಡದ ಅಧಿಕೃತ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಬೌಲರ್ಗಳು ಧೋನಿ ಅವರ ನಾಯಕತ್ವದಲ್ಲಿ ಆಡಲು ಇಷ್ಟ ಪಡುತ್ತಾರೆ. ಅವರಿಗೆ ಬೌಲರ್ಗಳ ಸಾಮರ್ಥ್ಯವನ್ನು ಅರಿಯುವ ಶಕ್ತಿಯಿದೆ. ಹೀಗಾಗಿ ಬೌಲರ್ಗಳಿಂದ ಅತ್ಯುತ್ತಮ ಆಟವನ್ನು ಹೊರತೆಗೆಯುವುದು ಧೋನಿಗೆ ತಿಳಿದಿದೆ" ಎಂದು ಗೌತಮ್ ಹೇಳಿದ್ದಾರೆ.