
ನವದೆಹಲಿ: ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಕೋಲ್ಕತ್ತಾ ನೈಟ್ ರೈಡರ್ಸ್ ಆಟಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಬೇಸರ ವ್ಯಕ್ತಪಡಿಸಿದ್ದಾರೆ. ಕೆಕೆಆರ್ ಆಟಗಾರರ ಕಳಪೆ ಮತ್ತು ಬೇಜಾವಾಬ್ದಾರಿಯುತ ಆಟಕ್ಕೆ ಲಾರಾ ಬೇಸರ ವ್ಯಕ್ತಪಡಿಸಿದ್ದಾರೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದಿದ್ದ ಐಪಿಎಲ್ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 152 ರನ್ ಪೇರಿಸಿ ಕೆಕೆಆರ್ಗೆ 153 ರನ್ ಗುರಿ ನೀಡಿತ್ತು.
ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲಿ ಸುಲಭ ಜಯ ಗಳಿಸುವ ನಿರೀಕ್ಷೆ ಮೂಡಿಸಿತ್ತಾದರೂ ಅಂತಿಮವಾಗಿ 10 ರನ್ನಿಂದ ತಲೆ ಬಾಗಿತ್ತು. ಒಂದು ಹಂತದಲ್ಲಿ ಕೆಕೆಆರ್ಗೆ ಗೆಲ್ಲಲು 30 ಎಸೆತಗಳಲ್ಲಿ 31 ರನ್ಗಳು ಬೇಕಿತ್ತು. ಆದರೂ ಆ್ಯಂಡ್ರೆ ರಸೆಲ್, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್ ಇಂಥ ಪ್ರಮುಖ ಆಟಗಾರರ ನೀರಸ ಬ್ಯಾಟಿಂಗ್ನಿಂದ ಕೋಲ್ಕತ್ತಾ ಸೋತಿತ್ತು.
ಕೆಕೆಆರ್ ಸೋಲಿನ ಬಗ್ಗೆ ಮಾತನಾಡಿದ ಲಾರಾ, 'ನೀವು ಇರಲಿ ಪರವಾಗಿಲ್ಲ ಅನ್ನೋ ರೀತಿ ಇರಬಾರದು. ನಿಮಗೆ ಉತ್ತಮ ಆರಂಭ ಸಿಕ್ಕಿದೆ. ನೀವು ಸೆನ್ಸಿಬಲ್ ಕ್ರಿಕೆಟ್ ಆಡಬೇಕಾಗಿ ಬರುತ್ತದೆ. ಎಂಐ ಲೆಗ್ ಸ್ಪಿನ್ನರ್ಗಳು ಕೆಕೆಆರ್ನ ಲೆಫ್ಟ್ ಹ್ಯಾಂಡರ್ಗಳ ವಿಕೆಟ್ ಪಡೆಯುವುದೆಂದರೆ ಅದು ಸಾಮಾನ್ಯವಲ್ಲ,' ಎಂದು ಹೇಳಿದ್ದಾರೆ.