
ಸಿಡ್ನಿ: ಭಾರತದಿಂದ ಬರುವ ವಿಮಾನಗಳಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ವಿಧಿಸಲಾಗಿರುವ ನಿರ್ಬಂಧದಿಂದ ಕ್ರಿಕೆಟ್ ಆಸ್ಟ್ರೇಲಿಯಾ ವಿನಾಯಿತಿ ಬಯಸುತ್ತಿಲ್ಲ. ಆದರೆ ನಮ್ಮ ಆಟಗಾರರನ್ನು ತವರಿಗೆ ವಾಪಸ್ ಕರೆತರಲು ಬೇಕಾದ ವ್ಯವಸ್ಥೆ ಕಲ್ಪಿಸಲು ನಾವು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಜೊತೆ ಕೈ ಜೋಡಿಸಲಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಮಂಗಳವಾರ (ಮೇ 4) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಮಾನತಾಗಿದೆ. ಬಯೋ ಬಬಲ್ ಒಳಗೆ ಹಲವಾರು ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡ ಬಳಿಕ 2021ರ ಐಪಿಎಲ್ ಅಮಾನತಾಗಿತ್ತು. ಹೀಗಾಗಿ ಆಸ್ಟ್ರೇಲಿಯಾದ ಆಟಗಾರರು ಸ್ವದೇಶಕ್ಕೆ ತೆರಳಲು ತಯಾರಾಗಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಶನ್ (ಎಸಿಎ) ಜೊತೆಯಾಗಿ ಆಸೀಸ್ ಆಟಗಾರರನ್ನು ಸ್ವದೇಶಕ್ಕೆ ಕರೆತರಲು ಯೋಜನೆ ರೂಪಿಸಲಿದೆ ಎಂದು ಸಿಎ ಹೇಳಿದೆ. ಮಾಹಿತಿಯ ಪ್ರಕಾರ, ಆಸೀಸ್ ಆಟಗಾರರು ಮಾಲ್ಡೀವ್ಸ್ಗೆ ತೆರಳಿ ಅಲ್ಲಿಂದ ಮತ್ತೆ ಆಸ್ಟ್ರೇಲಿಯಾಕ್ಕೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.
'ಭಾರತದಿಂದ ಬರುವ ವಿಮಾನಗಳನ್ನು ಕನಿಷ್ಠ ಮೇ 15ರವರೆಗಾದರೂ ನಿರ್ಬಂಧಿಸಿರುವ ಆಸ್ಟ್ರೇಲಿಯಾ ಸರ್ಕಾರದ ನಿಲುವನ್ನು ಸಿಎ ಮತ್ತು ಎಸಿಎ ಗೌರವಿಸುತ್ತದೆ. ನಾವು ಇದರಿಂದ ವಿನಾಯಿತಿ ಕೂಡ ಬಯಸುತ್ತಿಲ್ಲ. ಆದರೆ ನಮ್ಮ ಆಟಗಾರರನ್ನು ಹೇಗಾದರೂ ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಬದ್ಧರಾಗಿದ್ದೇವೆ,' ಎಂದು ಸಿಎ ಮತ್ತು ಎಸಿಎ ಹೇಳಿದೆ.