
ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು (ಏಪ್ರಿಲ್ 10) ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ. ಟೂರ್ನಿಯ ಚೊಚ್ಚಲ ಪಂದ್ಯ ಆಡುವುದಕ್ಕೂ ಮುನ್ನ ಡಿಸಿ ತಂಡದ ಎಂದಿನ ನಾಯಕ ಶ್ರೇಯಸ್ ಐಯ್ಯರ್ ವಿಶೇಷ ಸಂದೇಶ ಬರೆದಿದ್ದಾರೆ.
ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಎಲ್ಸ್ ತಂಡದ ಸಹ ಆಟಗಾರರನ್ನುದ್ದೇಶಿಸಿ ಶ್ರೇಯಸ್ ಐಯ್ಯರ್ ಒಂದು ಟ್ವೀಟ್ ಮಾಡಿದ್ದರು. ಡೆಲ್ಲಿ ತಂಡ ಚೊಚ್ಚಲ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಹಾಕಿಕೊಂಡಿದ್ದ ಶ್ರೇಯಸ್, 'ಡಿಯರ್ ದಿಲ್ಲಿ' ಎಂದು ಬರೆದು ಹಾರ್ಟ್ ಸಿಂಬಲ್ ಇಮೋಜಿ ಹಾಕಿಕೊಂಡಿದ್ದರು.
ಅಷ್ಟೇ ಅಲ್ಲ, ಅದೇ ವಿಡಿಯೋದಲ್ಲಿ ಡೆಲ್ಲಿಗಾಗಿ ಸ್ಫೂರ್ತಿಯ ಮಾತುಗಳನ್ನಾಡಿದ್ದ ಶ್ರೇಯಸ್, 'ತಂಡದ ಅಭಿಮಾನಿಯಾಗಿ ನಾನು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ನಾವು ಯಾವತ್ತೂ ಹೋರಾಡಿದಂತೆಯೇ ಇಂದೂ ಹೋರಾಡೋಣ. ನಾವು ಎಂದಿಗಿಂತಲೂ ಹೆಚ್ಚು ಶ್ರಮವಹಿಸೋಣ. ಪ್ರತೀ ಚೆಂಡು, ಪ್ರತೀ ಪಂದ್ಯಕ್ಕೂ ನಾನು ನಿಮ್ಮ ಜೊತೆಗಿದ್ದೇನೆ. ನಿಮಗೆ ದೊಡ್ಡದಾಗಿ ಚಿಯರ್ ಮಾಡುತ್ತೇನೆ. ಕಮಾನ್ ದಿಲ್ಲಿ, ಜೋರಾಗಿ ಘರ್ಜಿಸಿ' ಎಂದು ಹೇಳಿದ್ದರು.
ಶ್ರೇಯಸ್ ಸ್ಫೂರ್ತಿಯ ಮಾತುಗಳಿರುವ ವಿಡಿಯೋವನ್ನು ಸೇರಿಸಿ ಡಿಸಿ ಪ್ರತ್ಯೇಕ ಟ್ವೀಟ್ ಮಾಡಿದೆ. 'ಪ್ರೀತಿಯ ಶ್ರೇಯಸ್ ಐಯ್ಯರ್, ನಾವು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿನಗಾಗಿ ಮತ್ತು ನಿನ್ನೆಲ್ಲಾ ಅಭಿಮಾನಿಗಳಿಗಾಗಿ ಡಿಸಿ ಶಕ್ತಿ ಮೀರಿ ಅತ್ಯುತ್ತಮ ಪ್ರದರ್ಶನ ನೀಡಲಿದೆ' ಎಂದು ಟ್ವೀಟ್ನಲ್ಲಿ ಬರೆದುಕೊಳ್ಳಲಾಗಿದೆ. ಭಾರತ-ಇಂಗ್ಲೆಂಡ್ ಏಕದಿನ ಸರಣಿ ವೇಳೆ ಗಾಯ ಮಾಡಿಕೊಂಡಿದ್ದ ಶ್ರೇಯಸ್ ಈ ಬಾರಿಯ ಐಪಿಎಲ್ನಿಂದ ಹೊರ ಬಿದ್ದಿದ್ದಾರೆ. ತಂಡದ ನಾಯಕತ್ವವನ್ನು ರಿಷಭ್ ಪಂತ್ ವಹಿಸಿಕೊಂಡಿದ್ದಾರೆ.